ಪುತ್ತೂರು: ಪುತ್ತೂರಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬರು ಪತ್ನಿ ಮನೆಯಿಂದ ಕಾಣೆಯಾಗಿದ್ದಾಳೆ ಎಂದು ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.
ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ಮುದ್ದೋಡಿಯ ಲೂಯಿಸ್ ಡಿʼಸೋಜ ರವರ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಉತ್ತಮ ಬಾಬು ಇದರಗುಚ್ಚಿ ಎಂಬವರು ತನ್ನ ಪತ್ನಿ ಲಲಿತಾ ನಾಪತ್ತೆಯಾಗಿದ್ದಾಳೆ ಎಂದು ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕು ಹತ್ತರಗಿ ಇಂದಿರಾನಗರ ಗ್ರಾಮದ ನಿವಾಸಿಯಾಗಿರುವ ಉತ್ತಮ್ ಐದು ವರ್ಷಗಳ ಹಿಂದೆ ಲಲಿತಾ ಎಂಬವರನ್ನು ವಿವಾಹವಾಗಿದ್ದರು. ಮುರ ಸೆಲೂನ್ ಒಂದರಲ್ಲಿ ಕ್ಷೌರಿಕ ವೃತ್ತಿ ನಿರ್ವಹಿಸುವ ಉತ್ತಮ್ ಕಳೆದ ಎರಡು ತಿಂಗಳುಗಳಿಂದ ತನ್ನ ಪತ್ನಿಯೊಂದಿಗೆ ಸಾಲ್ಮರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ಜ.22 ರಂದು ಬೆಳಿಗ್ಗೆ ಉತ್ತಮ್ ತನ್ನ ಕೆಲಸಕ್ಕೆಂದು ಮನೆಯಿಂದ ಹೊರಟಿದ್ದು ಆ ಸಂದರ್ಭ ಅವರ ಪತ್ನಿ ಲಲಿತಾ ಮನೆಯಲ್ಲಿಯೇ ಇದ್ದರು. ಮದ್ಯಾಹ್ನ ಬಾಡಿಗೆ ಮನೆಯ ಮಾಲೀಕ ಲೂಯಿಸ್ ಡಿʼಸೋಜರವರು ಉತ್ತಮ್ ರವರಿಗೆ ಫೋನ್ ಮಾಡಿ ನಿನ್ನ ಪತ್ನಿ ಲಲಿತಾ ಅಂಗಡಿಗೆ ದಿನಸಿ ಸಾಮಾನು ತರಲು ಹೋದವಳು ಇನ್ನೂ ಬಂದಿಲ್ಲ ಎಂದು ಹೇಳಿರುತ್ತಾರೆ.
ಬಳಿಕ ಉತ್ತಮ್ ಮನೆಗೆ ಹೋಗಿ ನೋಡಿದಾಗ ಪತ್ನಿ ಲಲಿತಾ ನಾಪತ್ತೆಯಾಗಿರುವುದು ಕಂಡು ಬಂದಿದೆ. ಎಲ್ಲಾ ಕಡೆ ಹುಡುಕಾಡಿ ಪತ್ತೆಯಾಗದ ಹಿನ್ನಲೆಯಲ್ಲಿ ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ