ಪುತ್ತೂರಿನ ಹೃದಯ ಭಾಗದಲ್ಲಿ ಇರುವ ಮಾಯ್ ದೆ ದೇವುಸ್ ಚರ್ಚಿನಲ್ಲಿ ಯೇಸುಕ್ರಿಸ್ತನ ಪುರ್ನಜನ್ಮವನ್ನು ಸಾರುವ ಈಸ್ಟರ್ ಹಬ್ಬವನ್ನು ಆಚರಿಸಲಾಯಿತು.
ಚರ್ಚ್ ವಠಾರದ ಎಲ್ಲಾ ವಿದ್ಯುತ್ ಬೆಳಕನ್ನು ನಂದಿಸಿ ನಂತರ ಒಂದು ದೊಡ್ಡ ಮೇಣದ ಬತ್ತಿಗೆ ಯೇಸುವನ್ನು ಶಿಲುಬೆಗೆ ಏರಿಸಿದಾಗ ಹೊಡೆದಿರುವಂತಹ ಮೊಳೆಗಳನ್ನು ಚುಚ್ಚಲಾಗುತ್ತದೆ. ತದನಂತರ ಆಶೀರ್ವದಿಸಿದ ಹೊಸ ಬೆಂಕಿಯಿಂದ ಮೇಣದ ಬತ್ತಿಯನ್ನು ಹೊತ್ತಿಸಲಾಗುತ್ತದೆ. ಈ ಮೇಣದ ಬತ್ತಿಯನ್ನು ಹಿಡಿದ ಯಾಜಕರು ಜನರ ನಡುವಿನಿಂದ ಹೋಗುವಾಗ ಇದು ಯೇಸಕ್ರಿಸ್ತರ ಜ್ಯೋತಿಯು ಎಂದು ಉದ್ಗರಿಸಿದಾಗ ಎಲ್ಲಾ ಭಕ್ತಾದಿಗಳು ದೇವರಿಗೆ ಮಹಿಮೆ ಸಲ್ಲಲ್ಲಿ ಎಂದು ಜೈಕಾರವನ್ನು ಕೂಗುತ್ತಾ ಆ ಜ್ಯೋತಿಯಿಂದ ತಮ್ಮಲ್ಲಿ ಇರುವ ಮೇಣದ ಬತ್ತಿಯನ್ನು ಹೊತ್ತಿಸುತ್ತಾರೆ. ಧಾರ್ಮಿಕ ವಿಧಿವಿಧಾನಗಳು ಬೈಬಲ್ ನ ಹಳೆ ಒಡಂಬಡಿಕೆಯ ಮೂರು ವಚನಗಳು ಸ್ತುತಿ ಗೀತೆಗಳು ಆದನಂತರ ಪುನರುತ್ಥಾನ ಯೇಸುವಿನ ಪ್ರತಿಮೆಯು ಆನವರಣಗೊಳಿಸಲಾಗುತ್ತದೆ. ಚರ್ಚಿನ ಗಂಟೆಗಳ ನಿನಾದ ತಾರಕಕ್ಕೆ ಏರಿದವು.
ಈ ದಿವಸ ಜಾಗರಣೆಯ ರಾತ್ರಿ. ನಮಗೆಲ್ಲರಿಗೂ ರಕ್ಷಣೆಯನ್ನು ಅವರು ನೀಡಿದ್ದಾರೆ. ದೇವರ ಕುವರ ಮೂರು ದಿವಸ, ಮೂರು ರಾತ್ರಿ ಭೂಮಿಯ ಗರ್ಭದಲ್ಲಿ ಇರುತ್ತಾರೆ. ಈ ಪ್ರಪಂಚದಲ್ಲಿ ಎಷ್ಟೇ ದೊಡ್ಡ ವ್ಯಕ್ತಿ ಆತನ ಮರಣದ ನಂತರ ಎದ್ದು ಬಂದಿಲ್ಲ. ಯೇಸು ಕ್ರಿಸ್ತನನ್ನು ದಫನ ಮಾಡಿದ ಹೊಂಡ ಈಗಲೂ ಖಾಲಿ ಇರೋದು ಸಿಗುತ್ತದೆ. ಅಂದರೆ ಯೇಸು ಕ್ರಿಸ್ತರು ಜೀವಂತಗೊಂಡು ತನ್ನ ತಂದೆಯೊಂದಿಗೆ ಐಕ್ಯರಾಗುವುದರ ಜೊತೆಗೆ ಎಲ್ಲಾ ಕ್ರೈಸ್ತ ಅನುಯಾಯಿಗಳಿಗೆ ಪುನರುತ್ಥಾನ ಕರುಣಿಸಿದ ಪವಿತ್ರ ದಿನವಿದು ಇಂದು ತನ್ನ ಪ್ರವಚನದಲ್ಲಿ ವಂದನೀಯಾ ಸ್ಟ್ಯಾನಿ ಪಿಂಟೋ ರವರು ಸಂದೇಶ ನೀಡಿದರು.
ತದನಂತರ ದೊಡ್ಡ ಮೂರು ಪಾತ್ರೆಯಲ್ಲಿ ಇಟ್ಟಿರುವ ನೀರನ್ನು ಮೇಣದ ಬತ್ತಿಯನ್ನು ಮುಳುಗಿಸುವುದರ ಮುಖಾಂತರ ಆಶೀರ್ವದಿಸಿ ಮೇಣದಬತ್ತಿಯಿಂದ ಎಲ್ಲಾ ಭಕ್ತಾದಿಗಳು ಯೇಸು ಕ್ರಿಸ್ತರು ನಮಗೆ ನೀಡಿರುವ ಪುನರುತ್ಥಾನವನ್ನು ವಿಶ್ವಾಸಿಸುತ್ತೇವೆ ಎನ್ನುವ ವಾಗ್ದಾನವನ್ನು ನವೀಕರಿಸಿದ ನಂತರ ಪವಿತ್ರ ನೀರನ್ನು ಸಿಂಪಡಿಸಿ ಪಾವನರಾಗುತ್ತಾರೆ. ಬಲಿ ಪೂಜೆಯಲ್ಲಿ ಅತಿವಂದನೀಯ ಲಾರೆನ್ಸ್ ಮಸ್ಕರೇನಸ್, ವಂದನೀಯ ಕೆವಿನ್ ಲಾರೆನ್ಸ್ ಡಿಸೋಜಾ ವಂದನೀಯ ಅಶೋಕ್ ರಾಯನ್ ಕ್ರಾಸ್ತಾರವರು ಉಪಸ್ಥಿತರಿದ್ದರು.