ಪುತ್ತೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್.ಎಸ್.ಎಸ್) ಪುತ್ತೂರು ಜಿಲ್ಲೆಯ ನೂತನ ಕಾರ್ಯಾಲಯದ ಭೂಮಿ ಪೂಜನಾ ಕಾರ್ಯಕ್ರಮವು ಅ.15ರಂದು ನಡೆಯಿತು.
ಪುತ್ತೂರಿನ ಹಳೇ ಪೊಲೀಸ್ ವಸತಿ ನಿಲಯ ರಸ್ತೆಯಲ್ಲಿರುವ ‘ಪಂಚವಟಿ’ಯಲ್ಲಿ ಕಾರ್ಯಕ್ರಮವು ಇಂದು ಬೆಳಗ್ಗೆ ಜರಗಿತು. 95 ವರ್ಷಗಳ ಇತಿಹಾಸವಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪುತ್ತೂರು ಕಛೇರಿ ‘ಪಂಚವಟಿ’ ಹಲವಾರು ವರ್ಷಗಳಿಂದ ಪುತ್ತೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಂಘದ ಕಾರ್ಯ ಚಟುವಟಿಕೆಗಾಗಿ ಇನ್ನೂ ಹೆಚ್ಚಿನ ಸ್ಥಳಾವಕಾಶದ ಅವಶ್ಯಕತೆ ಇರುವುದರಿಂದ ನೂತನ ಕಟ್ಟಡ ನಿರ್ಮಾಣವಾಗಲಿದೆ.
ಕೇಶವ ಸ್ಮೃತಿ ಸಂವರ್ಧನ ಸಮಿತಿಯ ನೇತೃತ್ವದಲ್ಲಿ ಪಂಚವಟಿಯ ಭೂಮಿ ಪೂಜನಾ ಕಾರ್ಯಕ್ರಮ ನಡೆದಿದೆ.ಆರ್.ಎಸ್.ಎಸ್. ಜ್ಯೇಷ್ಠ ಪ್ರಚಾರಕ ದಾ.ಮ.ರವೀಂದ್ರ ಶಿಲಾನ್ಯಾಸ ನೆರವೇರಿಸಿದರು. ಪ್ರಾಂತ ಸಂಘ ಚಾಲಕ ಡಾ.ಪಿ.ವಾಮನ ಶೆಣೈ, ಪ್ರಾಂತ ಕಾರ್ಯಕಾರಿಣಿ ಆಮಂತ್ರಿತ ಸದಸ್ಯ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಕುಟುಂಬ ಪ್ರಬೋಧನ್ ವಿಭಾಗದ ಅಖಿಲ ಭಾರತೀಯ ಟೋಳಿ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಪುತ್ತೂರು ಜಿಲ್ಲಾ ಸಂಚಾಲಕ ಕೊಡ್ಮಣ್ ಕಾಂತಪ್ಪ ಶೆಟ್ಟಿ ಸಹಿತ ಹಲವರು ಭಾಗವಹಿಸಿದ್ದರು. ಮಹಾಲಿಂಗೇಶ್ವರ ದೇವಾಲಯದ ಅರ್ಚಕ ವಿ.ಎಸ್ ಭಟ್ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.