ಪುತ್ತೂರು : ನೆರೆಮನೆಯ ವಿವಾಹಿತ ಮಹಿಳೆಯೊಂದಿಗಿನ ಪ್ರೇಮ ಸಂಬಂಧ ಹೊಂದಿದ ವಿವಾಹಿತ ವ್ಯಕ್ತಿಯೋರ್ವ ಮರ್ಯಾದೆಗೆ ಅಂಜಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಟ್ಟಣಿಗೆ ಮೂಡ್ನೂರು ಗ್ರಾಮದ ವಜ್ರಮೂಲೆ ಎಂಬಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ನೆಟ್ಟಣಿಗೆ ಮುಡ್ನೂರು ಗ್ರಾಮದ ವಜ್ರಮೂಲೆ ದಿ.ಕೊರಗರವರ ಪುತ್ರ ಶೀನಪ್ಪ (50ವ.) ಎನ್ನಲಾಗಿದೆ.
ಮೃತರ ಪತ್ನಿ ಜಾನಕಿ ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶೀನಪ್ಪರವರು ಏ.2ರಂದು ಕೆಲಸಕ್ಕೆ ಹೋಗದೇ ಮನೆಯಲ್ಲಿದ್ದು, ಮಧ್ಯಾಹ್ನ ಮದ್ಯ ಸೇವಿಸಿ ಪತ್ನಿ ಹಾಗೂ ಪುತ್ರಿಗೆ ಬೈಯಲು ಆರಂಭಿಸಿ, ನಂತರ ಸಂಜೆ ಮೋಟಾರು `ಸೈಕಲ್ನಲ್ಲಿ ಪೇಟೆಗೆ ಹೋಗಿ ಬಂದವರು ಪತ್ನಿಗೆ ಏಕಾಏಕಿಯಾಗಿ ಹಲ್ಲೆ ಮಾಡುತ್ತಿರುವುದನ್ನು ಕಂಡು ಮಕ್ಕಳು ತಡೆದಿರುತ್ತಾರೆ.
ಇದೇ ವೇಳೆ ಶೀನಪ್ಪ ಪೇಟೆಗೆ ಹೋಗಿದ್ದಾಗ ಪತ್ನಿ ಹಾಗೂ ಮಕ್ಕಳು ನೆರೆಮನೆಯ ವಿವಾಹಿತ ಮಹಿಳೆ ರತ್ನಾರವರ ಮನೆಗೆ ಹೋಗಿ ‘ನನ್ನ ಗಂಡನಲ್ಲಿ ಯಾಕೆ ಮಾತನಾಡುತ್ತೀಯಾ’ ಎಂದು ಪ್ರಶ್ನಿಸಿದಾಗ ಅವರ ಮಧ್ಯೆ ಮಾತಿನ ಚಕಾಮಕಿ ನಡೆಯಿತು. ವಿಷಯ ತಿಳಿದ ಶೀನಪ್ಪರವರು ಪತ್ನಿ ಹಾಗೂ ಮಕ್ಕಳಿಗೆ ಹೊಡೆಯಲು ಯತ್ನಿಸಿದಾಗ ರತ್ನಾರವರು ತಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಬಳಿಕ ಶೀನಪ್ಪರವರು ಮನೆಗೆ ಬಂದು ಮೊಬೈಲ್, ಪರ್ಸ್, ಮೋಟಾರ್ ಸೈಕಲ್ನ್ನು ಮನೆಯಲ್ಲಿಟ್ಟು ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಮನೆಯವರು ಸಂಶಯಗೊಂಡು ಸುತ್ತಮುತ್ತ ಹುಡುಕಾಡಿದಾಗ ರಾತ್ರಿ ತೋಟದ ಪಕ್ಕದಲ್ಲಿರುವ ಮಾವಿನ ಮರಕ್ಕೆ ಪಾಲಿಸ್ಟರ್ ಸೀರೆಯಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿರುವುದು ಕಂಡುಬಂದಿದೆ.
ತನ್ನ ಗಂಡ ಹಾಗೂ ನೆರೆ ಮನೆಯ ರತ್ನಾರವರ ಪ್ರೇಮ ಸಂಬಂಧ ವಿಚಾರ ಪತ್ನಿ ಹಾಗೂ ನೆರೆಕರೆಯವರಿಗೆ ಗೊತ್ತಾಗಿ ಮರ್ಯಾದೆಗೆ ಅಂಜಿ ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತ ಶೀನಪ್ಪರವರ ಪತ್ನಿ ಜಾನಕಿಯವರು ನೀಡಿದ ದೂರಿನಂತೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.