ಪುತ್ತೂರು: ಶಿವರಾಮ ಕಾರಂತರ ರಂಗಪ್ರಯೋಗ ಶಾಲೆಯಾಗಿದ್ದ 156 ವರ್ಷದ ಹಳೆಯ ಕಟ್ಟಡ ನೆಲಸಮವಾಗಿದೆ. 1865 ರಲ್ಲಿ ಪುತ್ತೂರು ಹೃದಯ ಭಾಗವಾದ ನೆಲ್ಲಿಕಟ್ಟೆಯಲ್ಲಿ ಈ ಕಟ್ಟಡ ನಿರ್ಮಾಣಗೊಂಡಿರುವ ಈ ಶಾಲೆ ಕ್ರಮೇಣ ನಿರ್ವಹಣೆ ಇಲ್ಲದೆ ಶಿಥಿಲಗೊಂಡಿತ್ತು.
ಆದರೆ ಡಿ.12ರಂದು ಭಾನುವಾರ ಸ್ಥಳೀಯ ಮಕ್ಕಳು ಆಡವಾಡುತ್ತಿದ್ದ ವೇಳೆ ಕಟ್ಟಡದ ಒಂದು ಭಾಗ ಕುಸಿದು ಬಿದಿದ್ದು, ಇನ್ನೂ ಮಕ್ಕಳ ಓಡಾಟದ ಸಮಯ ಅಪಾಯ ಸಂಭವಿಸಬಾರದು ಎಂಬ ನೆಲೆಯಲ್ಲಿ ಜೆಸಿಬಿ ಮೂಲಕ ಕಟ್ಟಡವನ್ನು ನೆಲಸಮ ಮಾಡಲಾಗಿದೆ ಎಂದು ತಿಳಿದು ಬಂದಿದೆ.
156 ವರ್ಷದ ಹಳೆಯ ಕಟ್ಟಡ ಇದು. ಬ್ರಿಟಿಷ್ ಸರಕಾರ ಕೆಂಪು ಕಲ್ಲು ಬಳಸಿ ಕಟ್ಟಿದ ಈ ದೊಡ್ಡ ಕಟ್ಟಡದ ಸುತ್ತಲೂ ಸುತ್ತಲೂ ಉರುಟು ಉರುಟಾದ ಕಂಬಗಳನ್ನು ನೆಡಲಾಗಿದೆ. ಮರದ ದೊಡ್ಡ ತೊಲೆಗಳನ್ನು ಬಳಸಿ ಗಟ್ಟಿ, ಚಾವಣಿ ನಿರ್ಮಿಸಲಾಗಿತ್ತು. ಇದರಲ್ಲೇ ಪುತ್ತೂರಿನ ಮೊದಲ ಪ್ರಾಥಮಿಕ ಶಾಲೆ ಆರಂಭವಾಗಿತ್ತು.
ಸ್ವಾತಂತ್ರ್ಯ ಪೂರ್ವದಲ್ಲಿ ಈ ಭಾಗದ ಜನತೆಗೆ ಅಕ್ಷರಾಭ್ಯಾಸ ಮಾಡಿದ, ಓದು ಬರಹ ಕಲಿಸಿದ, ಶಿಕ್ಷಣ ನೀಡಿದ ಹಿರಿಮೆ ಈ ನೆಲ್ಲಿಕಟ್ಟೆ ಶಾಲೆಯದ್ದು. ಶಿವರಾಮ ಕಾರಂತರು ಇದೇ ಶಾಲಾ ಕಟ್ಟಡ ದೊಳಗೆ ತಮ್ಮ ರಂಗಭೂಮಿಯ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಕಾರಂತರ ರಂಗ ಪ್ರಯೋಗಗಳು ನಡೆದದ್ದು ಇಲ್ಲಿಯೇ. ಇದಕ್ಕಾಗಿ ಒಳಗೆ ಒಂದು ವೇದಿಕೆಯನ್ನೇ ನಿರ್ಮಿಸಲಾಗಿದೆ.
ಪುತ್ತೂರಿನ ಮೊದಲ ಗಣೇಶೋತ್ಸವ ಆರಂಭವಾಗಿದ್ದು, ಕಾರಂತರು ಪುತ್ತೂರು ದಸರಾ ನಾಡಹಬ್ಬವನ್ನು ಕಾರಂತರು ಆರಂಭಿಸಿದ್ದು ಇದೇ ಶಾಲೆಯಲ್ಲಿ. ಈ ಕಟ್ಟಡ ಬಳಿಕದ ದಿನಗಳಲ್ಲಿ ಅನಾಥವಾಗಿತ್ತು. ಈ ನಡುವೆ ನಿರ್ವಾಹಣೆ ಇಲ್ಲದೆ ಚಾವಣಿ ಕುಸಿದು, ಹೆಂಚು ಬಿದ್ದು ಪುಡಿಯಾಗಿತ್ತು. ಕಟ್ಟಡದೊಳಗೆ ನೀರು ತುಂಬಿ, ನಿಶಾಚರಿಗಳ ತಾಣವಾಗಿತ್ತು.
ಆದರೆ ಇದೀಗ ರಾತ್ರಿ ಬೆಳಗಾಗುವುದರೊಳಗೆ ಕಟ್ಟಡ ನೆಲಸಮಗೊಂಡಿದೆ. ಕಟ್ಟಡ ತೆರವು ಮಾಡುವ ವೇಳೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು ಎಂದು ತಿಳಿದು ಬಂದಿದೆ.
ಕಟ್ಟಡ ನಿರ್ವಹಣೆಗಾಗಿ ಕೆಲಸ ಮಾಡುತ್ತಿದ್ದ ವೇಳೆ ಕುಸಿತ: ಶಾಲೆಯ ಕಟ್ಟಡವನ್ನು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಎಸ್.ಡಿ.ಎಂ.ಸಿ ಮೂಲಕ ಅನೇಕ ಬಾರಿ ಶಾಸಕರಿಗೆ, ಸಂಬಂಧಿಸಿದ ಇಲಾಖೆಗೆ ಮನವಿ ಮಾಡಲಾಗಿತ್ತು. ಯಾವುದೇ ಅನುದಾನ ಇಲ್ಲದೆ ದುರಸ್ಥಿತಿ ಮಾಡಲಾಗಿಲ್ಲ. ಈ ನಡುವೆ ನಮ್ಮ ಶಾಲೆಯ ಮಕ್ಕಳು ಮತ್ತು ಪರಿಸರದ ಮಕ್ಕಳು ಅಲ್ಲಿ ಆಟವಾಡುತ್ತಿದ್ದ ವೇಳೆ ಕಟ್ಟಡದ ಕೆಲವು ಭಾಗ ಬಿದ್ದ ಘಟನೆ ನಡೆದಿದೆ.
ಈ ನಿಟ್ಟಿನಲ್ಲಿ ಪೋಷಕರು ಶಾಲೆಗೆ ಮಕ್ಕಳನ್ನು ಕಲುಹಿಸಲು ಹಿಂದೇಟು ಹಾಕುತ್ತಿದ್ದರು. ಈ ನಿಟ್ಟಿನಲ್ಲಿ ಆದಿತ್ಯವಾರ ಶಾಲಾ ಎಸ್ಡಿಎಂಸಿ ಮತ್ತು ಸ್ಥಳೀಯರು ಸೇರಿ ಕಟ್ಟಡ ನಿರ್ವಹಣೆ ಮಾಡಲು ಶಾಸಕರ ಅನುಮತಿ ಪಡೆದು ಹಂಚು ತೆರವು ಕಾರ್ಯ ನಡೆಸುತ್ತಿದ್ದೆವು. ಈ ವೇಳೆ ಕಟ್ಟಡದ ಒಂದು ಭಾಗ ಪೂರ್ಣ ಕುಸಿದು ಬಿತ್ತು.
ಆ ಸಂದರ್ಭ ಮುಂದೆ ಕಟ್ಟಡದ ಉಳಿದ ಭಾಗವು ಬೀಳುವ ಹಂತದಲ್ಲಿದೆ ಎಂದು ತುರ್ತಾಗಿ ಎಸ್.ಡಿ.ಎಂ.ಸಿ ಮತ್ತು ಸ್ಥಳೀಯರ ಜೊತೆ ಸಭೆ ನಡೆಸಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಕಟ್ಟಡ ತೆರವು ಮಾಡುವ ನಿರ್ಣಯ ಕೈಗೊಂಡು ಕಟ್ಟಡ ತೆರವು ಗೊಳಿಸಿದ್ದೇವೆ ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಪಂಚಾಕ್ಷರಿ ಅವರು ಮಾಹಿತಿ ನೀಡಿದ್ದಾರೆ.