ಮಂಗಳೂರು: ಬಜರಂಗದಳ ಮತ್ತು ದುರ್ಗಾ ವಾಹಿನಿ ಸುರತ್ಕಲ್ ಪ್ರಖಂಡದಿಂದ ಅ.4ರಂದು ನಡೆದ ಜನಜಾಗೃತಿಯ ಸಭೆಯಲ್ಲಿ ಚೈತ್ರಾ ಕುಂದಾಪುರ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಖಾಸಗಿ ವ್ಯಕ್ತಿಗಳು ಸಹಿತ ಸಂಘಟನೆಗಳು ದೂರು ನೀಡಿದ್ದು, ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಅಬ್ದುಲ್ ಖಾದರ್ ಎಂಬವರು ಮುಸ್ಲಿಂ ಸಮುದಾಯವನ್ನು ಅವಹೇಳನಗೈದು ನೀಡಿರುವ ಹೇಳಿಕೆ ಆಧರಿಸಿ ದೂರು ನೀಡಿದ್ದರು. ಅಬ್ದುಲ್ ಖಾದರ್ ದೂರನ್ನು ಪರಿಗಣಿಸಿ ಪೊಲೀಸರು ಐಪಿಸಿ ಸೆಕ್ಷನ್ 153 ಎ ಮತ್ತು 505/2ರ ಅಡಿ ಕೇಸು ದಾಖಲಿಸಿದ್ದಾರೆ. ಇವರೆಡು ಸೆಕ್ಷನ್ ಗಳೂ ಜಾಮೀನು ರಹಿತ ಆಗಿದ್ದು ಪೊಲೀಸರು ವಶಕ್ಕೆ ಪಡೆದು ಕೋರ್ಟಿಗೆ ಹಾಜರು ಪಡಿಸಬೇಕಾಗುತ್ತದೆ.
ಸಭೆಯಲ್ಲಿ ಚೈತ್ರ ಕುಂದಾಪುರ, ‘ಬ್ಯಾರಿಗಳು ಮೀನು ಮಾರುವವರು, ಇವರಿಗೆ ನಮ್ಮ ಅನ್ನ ತಿಂದು ಜೀವಿಸಲು ಎಷ್ಟು ಅಹಂಕಾರ, ನಾವು ಬಜರಂಗದಳ, ಮನಸ್ಸು ಮಾಡಿದರೆ ಎರಡು ದಿನದಲ್ಲಿ ಎಲ್ಲಾ ಮುಸಲ್ಮಾನರ ಹೆಣ್ಣು ಮಕ್ಕಳನ್ನು ಹಿಂದೂ ಧರ್ಮಕ್ಕೆ ಮತಾಂತರ ಮಾಡುತ್ತೇವೆ. ಮನೆಯಿಂದ ಅವರಿಗೆ ಬುರ್ಖಾ ತೆಗೆಸಿ ಕುಂಕುಮ ಇಟ್ಟು ಮತಾಂತರ ಮಾಡುತ್ತೇವೆ’ ಎಂಬ ಮಾತುಗಳನ್ನು ಆಡಿರುವುದಾಗಿ ದೂರುಗಳು ದಾಖಲಾಗಿತ್ತು.ಈ ಮಾತುಗಳು ಒಂದು ಧರ್ಮವನ್ನು ಅವಹೇಳನ ಮಾಡಿದಂತೆ ಎಂಬುದಾಗಿ ಪರಿಗಣಿಸಿ, ಪೊಲೀಸರು ಕಾನೂನು ತಜ್ಞರಿಂದ ಅಭಿಪ್ರಾಯ ಪಡೆದು ಪ್ರಕರಣ ದಾಖಲಿಸಿದ್ದಾರೆ.