ಬಂಟ್ವಾಳ: ರಾತ್ರಿ ಸುರಿದ ಬಾರಿ ಮಳೆಗೆ ನೂರಾರು ವರ್ಷಗಳ ಇತಿಹಾಸವಿದ್ದ ಬೃಹತ್ ಅಶ್ವಥ ಮರವೊಂದು ಉರುಳಿ ಬಿದ್ದ ಘಟನೆ ನಡೆದಿದೆ. ಇದರಿಂದಾಗಿ ಕಾರು ಜಖಂಗೊಂಡು, ಕಾರಿನಲ್ಲಿದ್ದ ವ್ಯಕ್ತಿಯೋರ್ವನಿಗೆ ಗಾಯವಾಗಿದೆ. ಲುಕ್ಮಾನ್ ಎಂಬಾತ ಗಾಯಾಳು ವ್ಯಕ್ತಿ.
ಈ ಘಟನೆ ಸಜೀಪನಡು ಗ್ರಾಮದ ಲಕ್ಷಣ ಕಟ್ಟೆ ಎಂಬಲ್ಲಿ ನಡೆದಿದೆ. ಸುಮಾರು 600 ವರ್ಷಗಳ ಇತಿಹಾಸವಿದ್ದ ಅಶ್ವಥ ಮರವೊಂದು ಉರುಳಿಬಿದ್ದಿದೆ. ಲುಕ್ಮಾನ್ ಅವರ ಜೊತೆಯಲ್ಲಿ ಇಬ್ಬರು ಸಂಬಂಧಿಕ ಮಹಿಳೆಯರು ಪೇಟೆಗೆ ಹೋಗಿ ವಾಪಾಸು ಮನೆಗೆ ಬರುವ ವೇಳೆ ಕಾರು ನಿಲ್ಲಿಸಿದ್ದಾರೆ.
ಕಾರು ನಿಲ್ಲಿಸಿ ಮಹಿಳೆಯರಿಬ್ಬರು ಕಾರಿನಿಂದ ಇಳಿದು ಹೋಗುತ್ತಿದ್ದಂತೆ ಮರ ಉರುಳಿ ಬಿದ್ದಿದೆ. ಕಾರಿನೊಳಗಿದ್ದ ಮಾಲಕ ಲುಕ್ಮಾನ್ ಇಳಿಯಬೇಕು ಎನ್ನುವಷ್ಟರಲ್ಲಿ ಘಟನೆ ಸಂಭವಿಸಿದ್ದರಿಂದ ಸಣ್ಣಪುಟ್ಟ ಗಾಯವಾಗಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಎಸ್.ಐ.ಸಂಜೀವ, ಸಿಬ್ಬಂದಿಗಳಾದ ಸುರೇಶ್, ಪುನೀತ್ , ಮಾಂತೇಶ್ ಅವರು ಬೇಟಿ ನೀಡಿ ಸ್ಥಳೀಯರ ಸಹಕಾರ ದೊಂದಿಗೆ ಮರವನ್ನು ತೆರವುಗೊಳಿಸುವ ಕಾರ್ಯಮಾಡಿದ್ದಾರೆ.