ನವದೆಹಲಿ: ಕೇಂದ್ರಾಡಳಿತ ಪ್ರದೇಶ ಲಡಾಖ್ ಪ್ರಾಂತ್ಯದ ಅಭಿವೃದ್ಧಿಗೆ ಹಲವು ಮಹತ್ವದ ತೀರ್ಮಾನಗಳನ್ನು ಗುರುವಾರ ತೆಗೆದುಕೊಳ್ಳಲಾಗಿದೆ. ಸಭೆಯ ಮಾಹಿತಿ ನೀಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್, ಲಡಾಖ್ನಲ್ಲಿ ₹ 750 ಕೋಟಿ ವೆಚ್ಚದಲ್ಲಿ ಕೇಂದ್ರೀಯ ವಿವಿ ಸ್ಥಾಪನೆಗೆ ಸಂಪುಟ ಅನುಮೋದನೆ ನೀಡಿದೆ. ಕೇಂದ್ರೀಯ ವಿದ್ಯಾಲಯ ಕಾರ್ಯಾರಂಭ ಮಾಡುವುದರಿಂದ ಲಡಾಖ್ನಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತು ಸಿಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಂಪನಿ ಕಾಯ್ದೆಯ ಅಡಿ ಬಹೋಪಯೋಗಿ ಮೂಲಸೌಕರ್ಯ ಕಾರ್ಪೊರೇಷನ್ ಸ್ಥಾಪನೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಕಚ್ಚಾ ಉಕ್ಕು ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲಿಯೇ 2ನೇ ಸ್ಥಾನದಲ್ಲಿದೆ. ₹ 6,322 ಕೋಟಿ ವೆಚ್ಚದಲ್ಲಿ ಉಕ್ಕಿಗೆ ಉತ್ಪಾದನೆ ಆಧರಿತ ಪೋತ್ಸಾಹಧನ ನೀಡಲಾಗುವುದು. ಇದರಿಂದ ₹ 39 ಸಾವಿರ ಕೋಟಿ ರೂಪಾಯಿ ಹೂಡಿಕೆಯನ್ನು ಆಕರ್ಷಿಸುವುದು ಭಾರತದ ಉದ್ದೇಶ. ಹೀಗೆ ಮಾಡುವುದರಿಂದ ಉಕ್ಕು ಆಮದು ಪ್ರಮಾಣ ಕಡಿಮೆಯಾಗುತ್ತದೆ ಎಂದು ಅವರು ತಿಳಿಸಿದರು.
ಪ್ರತಿ ಹಳ್ಳಿಗೂ ಬ್ರಾಡ್ಬ್ಯಾಂಡ್ ಸಂಪರ್ಕ ಒದಗಿಸಲು ಕೇಂದ್ರದ ನಿರ್ಧಾರ:
ಭಾರತದ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್ಬ್ಯಾಂಡ್ ಸಂಪರ್ಕ ನೀಡುವ ಉದ್ದೇಶದಿಂದ ರೂಪಿಸಿದ್ದ ಭಾರತ್ ನೆಟ್ ಯೋಜನೆಯ ವ್ಯಾಪ್ತಿಯನ್ನು ಕೇಂದ್ರ ಸರ್ಕಾರ ಈಗ ವಿಸ್ತರಿಸಿದೆ. ದೇಶದ ಪ್ರತಿಯೊಂದು ಹಳ್ಳಿಗೂ ಬ್ರಾಡ್ಬ್ಯಾಂಡ್ ಸಂಪರ್ಕ ನೀಡಲು ನಿರ್ಧರಿಸಿದೆ. ಇದರಿಂದ ಹಳ್ಳಿಗಳಲ್ಲಿ ಇಂಟರ್ ನೆಟ್ ಸಂಪರ್ಕದ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ ಇದೆ. ಭಾರತ್ ನೆಟ್ ಯೋಜನೆಯನ್ನು ಪಿಪಿಪಿ ಮಾಡೆಲ್ನಲ್ಲಿ ಜಾರಿ ಮಾಡಲು ಕೇಂದ್ರ ಸರ್ಕಾರ ಜಾಗತಿಕ ಟೆಂಡೡ ಕರೆದಿದೆ.
ದೇಶದ ಎಲ್ಲ ಗ್ರಾಮಗಳಿಗೂ ಬ್ರಾಡ್ಬ್ಯಾಂಡ್ ಸಂಪರ್ಕ ನೀಡಬೇಕು. ಈ ಮೂಲಕ ಡಿಜಿಟಲ್ ಇಂಡಿಯಾದ ಕನಸು ಸಾಕಾರವಾಗಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಬಯಕೆ. ಇದಕ್ಕಾಗಿ ಭಾರತ್ ನೆಟ್ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿದೆ.
ಈಗ ದೇಶದ 16 ರಾಜ್ಯಗಳಲ್ಲಿ ಪಿಪಿಪಿ ಮಾಡೆಲ್ನಲ್ಲಿ ಭಾರತ್ ನೆಟ್ ಯೋಜನೆ ಜಾರಿಗೊಳಿಸಲು ಜಾಗತಿಕ ಟೆಂಡರ್ ಕರೆಯಲಾಗಿದೆ. ಬರೋಬ್ಬರಿ ₹ 29,500 ಕೋಟಿ ವೆಚ್ಚದಲ್ಲಿ ಭಾರತ್ ನೆಟ್ ಯೋಜನೆ ಜಾರಿಗೊಳಿಸಲಾಗುತ್ತಿದೆ. ಕೇಂದ್ರದ ಟೆಲಿಕಮ್ಯೂನಿಕೇಶನ್ ಮತ್ತು ಇನ್ಫರ್ಮೇಶನ್ ಟೆಕ್ನಾಲಜಿ ಇಲಾಖೆಯ ಹೊಣೆ ಹೊತ್ತಿರುವ ಅಶ್ವಿನಿ ವೈಷ್ಣವ್ಗೆ ಪ್ರಧಾನಿ ಮೋದಿ ನೀಡಿರುವ ಮೊದಲ ಟಾಸ್ಕ್ ಇದು.
ದೇಶದಲ್ಲಿರುವ 6.3 ಲಕ್ಷ ಹಳ್ಳಿಗಳಿಗೂ 2023ರೊಳಗೆ ಬ್ರಾಡ್ಬ್ಯಾಂಡ್ ಸಂಪರ್ಕ ನೀಡಬೇಕು ಎನ್ನುವುದು ಕೇಂದ್ರ ಸರ್ಕಾರದ ಗುರಿ. ಕಳೆದ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಕೆಂಪುಕೋಟೆ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಂದಿನ ಒಂದು ಸಾವಿರ ದಿನಗಳಲ್ಲಿ ಈ ಗುರಿ ತಲುಪಲಾಗುತ್ತೆ ಎಂದು ಹೇಳಿದ್ದರು.
ಈಗ ದೇಶದ 3.61 ಲಕ್ಷ ಹಳ್ಳಿಗಳಿಗೆ ಆಪ್ಟಿಕಲ್ ಫೈಬರ್ ಸಂಪರ್ಕ ನೀಡಲು ಜಾಗತಿಕ ಟೆಂಡರ್ ಕರೆಯಲಾಗಿದೆ. ಪ್ರಧಾನಿ ಮೋದಿ ಅವರ ಕನಸಿನ ಯೋಜನೆಯನ್ನು ಕಾಲಮಿತಿಯಲ್ಲಿ ಜಾರಿಗೊಳಿಸಿ ಸಾಕಾರಗೊಳಿಸುವ ಸವಾಲನ್ನು ಟಿಲಿಕಮ್ಯುನಿಕೇಶನ್ ಸಚಿವ ಅಶ್ವಿನಿ ವೈಷ್ಣವ್ ಹೊತ್ತಿದ್ದಾರೆ