ಬೀರೂರು : ಮನೆಯವರಿಗೆ ಇಷ್ಟವಿಲ್ಲದಿದ್ದರೂ ಪ್ರೀತಿಸಿದ ಹುಡುಗನನ್ನೇ ಮದುವೆಯಾಗುವುದಾಗಿ ಹಠಹಿಡಿದಿದ್ದ ಪುತ್ರಿಯನ್ನು ತಂದೆಯೇ ಕೊಲೆ ಮಾಡಿರುವ ಘಟನೆ ಶಿವಮೊಗ್ಗದ ಬೀರೂರಿನಲ್ಲಿ ನಡೆದಿದೆ.
ಬುಧವಾರ ರಾತ್ರಿ 8:30 ರ ಸುಮಾರಿಗೆ ಬೀರೂರು ರೈಲ್ವೆ ಗೇಟ್ ಸಮೀಪ ಈ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕೆಂಚನಕೊಪ್ಪದ ಚಂದ್ರಪ್ಪ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ. ಆತ ತನ್ನ ಪುತ್ರಿ ರಾಧಾಳ ಕುತ್ತಿಗೆಗೆ ವೇಲ್ ನಿಂದ ಬಿಗಿದು ಕೊಲೆ ಮಾಡಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ.
ಮಗಳು ರಾಧಾ ಅದೇ ಊರಿನ ಯುವಕನನ್ನು ಪ್ರೀತಿಸುತ್ತಿದ್ದಳು. ಇದು ಆಕೆಯ ಮನೆಯವರಿಗೆಗೆ ಇಷ್ಟ ಇರಲಿಲ್ಲ. ಹಾಗಾಗಿ ರಾಧಾಳನ್ನು ಚಂದ್ರಪ್ಪನ ಸೋದರಿಯ ಮನೆಯಲ್ಲಿ ಬಿಡಲಾಗಿತ್ತು. ಊರಿನಲ್ಲಿ ಹಬ್ಬವಿದ್ದ ಕಾರಣ ಮಗಳನ್ನು ಬುಧವಾರ ರಾತ್ರಿ ಬೈಕ್ ನಲ್ಲಿ ಊರಿಗೆ ಕರೆದುಕೊಂಡು ಬರುತ್ತಿದ್ದ ಚಂದ್ರಪ್ಪ ಮಗಳಿಗೆ ಬುದ್ಧಿವಾದ ಹೇಳಿದ್ದಾನೆ. ಆದರೆ ಮಗಳು ಪ್ರೀತಿಸಿದ ಯುವಕನನ್ನೇ ಮದುವೆಯಾಗುವುದಾಗಿ ಹೇಳಿದ್ದಾಳೆ. ಇದರಿಂದ ಸಿಟ್ಟಾದ ಚಂದ್ರಪ್ಪ ವೇಲ್ ನಿಂದ ಕುತ್ತಿಗೆ ಬಿಗಿದು ಪುತ್ರಿಯನ್ನು ಕೊಲೆ ಮಾಡಿ ಮೃತದೇಹವನ್ನು ಬಿಟ್ಟು ಮಧ್ಯರಾತ್ರಿ 2.30 ರ ವೇಳೆಗೆ ಮನೆಗೆ ತಲುಪಿದ್ದಾನೆ.
ಈ ವಿಚಾರವನ್ನು ಮನೆಯವರಿಗೆ ತಿಳಿಸಿ, ತಾನೂ ನೇಣು ಹಾಕಿಕೊಳ್ಳಲು ಯತ್ನಿಸಿದ್ದಾನೆ. ಆಗ ಮನೆಯವರು ತಡೆದು ಸಮಾಧಾನ ಮಾಡಿದ್ದಾರೆ. ಆನಂತರ ಆತನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಚಂದ್ರಪ್ಪನಿಂದ ಮಾಹಿತಿ ಪಡೆದ ಪೊಲೀಸರು ಆತನನ್ಜು ಬೀರೂರು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಬೀರೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.