ಬೆಂಗಳೂರು: ಐದು ವರ್ಷದಿಂದ ಪ್ರೀತಿಸುತ್ತಿದ್ದ ಯುವತಿಯನ್ನು ಪಾಗಲ್ ಪ್ರೇಮಿಯೊಬ್ಬ 16ಬಾರಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರೋ ಘಟನೆ ಸಿಲಿಕಾನ್ ಸಿಟಿಯ ಮುರಗೇಶ್ ಪಾಳ್ಯದ ಎನ್ಎ ಎಲ್ ರಸ್ತೆಯಲ್ಲಿ ನಡೆದಿದೆ.
ಆಂಧ್ರಪ್ರದೇಶ ಮೂಲದ, ಲೀಲಾ ಪವಿತ್ರಾ (26) ಮೃತಪಟ್ಟ ಯುವತಿ. ಪಾಗಲ್ ಪ್ರೇಮಿ ದಿನಕರ್ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಒಮೆಗಾ ಮೆಡಿಸನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಲೀಲಾ ಪವಿತ್ರಾ ಹಾಗೂ ದಿನಕರ್ ಕಳೆದ 5 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು. ಆದರೆ ಇತ್ತೀಚೆಗೆ ಲೀಲಾ, ದಿನಕರ್ರನ್ನು ಅವಾಯ್ಡ್ ಮಾಡುತ್ತಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಲೀಲಾಳನ್ನು ಹತ್ಯೆಗೈದಿದ್ದಾನೆ.
ಲೀಲಾ ಕೆಲಸ ಮುಗಿಸಿ ಹೊರಗಡೆ ಬರೋದನ್ನೇ ಕಾಯುತ್ತಿದ್ದ ದಿನಕರ್, ಮಾತನಾಡಿಸುವ ನೆಪದಲ್ಲಿ ಆಕೆಯ ಎದೆ, ಹೊಟ್ಟೆ, ಕುತ್ತಿಗೆ ಭಾಗಕ್ಕೆ ಇರಿದು ಕೊಲೆ ಮಾಡಿದ್ದಾನೆ. ಲೀಲಾ ಪವಿತ್ರಾ ಹಾಗೂ ದಿನಕರ್ ಪ್ರೀತಿಗೆ ಜಾತಿ ಅಡ್ಡಿಯಾಗಿತ್ತು ಎನ್ನಲಾಗಿದೆ. ಹೀಗಾಗಿ ವಿವಾಹಕ್ಕೆ ಯುವತಿ ಪೋಷಕರು ಒಪ್ಪಿರಲಿಲ್ಲ. ಹೀಗಾಗಿ ಲೀಲಾ ದಿನಕರ್ನನ್ನು ಅವಾಯ್ಡ್ ಮಾಡುತ್ತಿದ್ದಳು ಎನ್ನಲಾಗಿದೆ. ಇದರಿಂದ ಕೋಪಗೊಂಡ ದಿನಕರ್ ಲೀಲಾಳನ್ನು ಮದುವೆಯಾಗುವಂತೆ ಬೆನ್ನುಬಿದ್ದಿದ್ದ. ಆದರೆ ಯುವತಿ ಒಪ್ಪದಿದ್ದಕ್ಕೆ ಉಸಿರನ್ನೇ ನಿಲ್ಲಿಸಿಬಿಟ್ಟಿದ್ದಾನೆ. ಕೊಂದ ಬಳಿಕ ಲೀಲಾ ಪವಿತ್ರಾಳ ಮೃತದೇಹದ ಪಕ್ಕದಲ್ಲೇ ಕುಳಿತು ಕಾಲ ಕಳೆದಿದ್ದಾನೆ.
ಇನ್ನು ಘಟನೆ ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಟೇಪ್ ಗ್ರಿಲ್ ಹಾಕಿ, ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಯುವತಿಯ ಮೃತದೇಹ ಕೊಂಡೊಯ್ದ ಮೇಲೂ ಅಲ್ಲೇ ಇದ್ದ ದಿನಕರ್ನನ್ನು ಪೊಲೀಸರು ಕರೆದೊಯ್ದಿದ್ದಾರೆ. ಸದ್ಯ ಘಟನೆ ಸಂಬಂಧ ಜೀವನ್ ಭೀಮಾನಗರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.