ತನ್ನ ಪ್ರೇಯಸಿಯನ್ನು ಭೇಟಿಯಾಗಿ ಸರ್ಪ್ರೈಸ್ ಕೊಡಲು ಎಲೆಕ್ಟ್ರಿಷಿಯನ್ ಒಬ್ಬ ಹಳ್ಳಿಯೊಂದಕ್ಕೆ ವಿದ್ಯುತ್ ಪೂರೈಕೆ ಯನ್ನೇ ಕಡಿತಗೊಳಿಸಿದ ಘಟನೆ ನಡೆದಿದೆ.
ಪುರ್ನಿಯಾ ಜಿಲ್ಲೆಯ ಗಣೇಶ್ಪುರ ಗ್ರಾಮದ ಜನರು ಅಕ್ಕಪಕ್ಕದ ಹಳ್ಳಿಗಳಲ್ಲಿ ಯಾವುದೇ ವಿದ್ಯುತ್ ಸಮಸ್ಯೆಯಿಲ್ಲ ಎಂದು ಗೊತ್ತಾದ ಬಳಿಕ ಜನರು ಇದರ ಹಿನ್ನೆಲೆಯಲ್ಲಿ ಭೇದಿಸಿದಾಗ ಇದೆಲ್ಲದರ ಹಿಂದೆ ಎಲೆಕ್ಟ್ರಿಷಿಯನ್ನ ಕೈವಾಡ ಇರುವುದು ಗೊತ್ತಾಗಿದೆ. ಕೆಲವು ತಿಂಗಳುಗಳಿಂದ ಆ ಗ್ರಾಮದ ಜನರು ಆಗಾಗ ವಿದ್ಯುತ್ ಕಡಿತವನ್ನು ಅನುಭವಿಸುತ್ತಿದ್ದರು. ಇದಕ್ಕೆ ನಿಖರವಾದ ಸಮಸ್ಯೆ ಏನೆಂದು ಕಂಡುಹಿಡಿಯಲು ಅವರು ನಿರ್ಧರಿಸಿದರು. ಅವರು ವಿಷಯವನ್ನು ಪರಿಶೀಲಿಸಿದ ನಂತರ, ಎಲೆಕ್ಟ್ರಿಷಿಯನ್ ತನ್ನ ಗೆಳತಿಯನ್ನು ಕತ್ತಲೆಯಲ್ಲಿ ಭೇಟಿಯಾಗಲು ಹಳ್ಳಿಯ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಿದ್ದಾನೆ ಎಂದು ತಿಳಿದು ಆಘಾತಕ್ಕೊಳಗಾದರು. ನಂತರ ಗ್ರಾಮಸ್ಥರು ಆತನನ್ನು ಹಿಡಿಯಲು ಯೋಜನೆ ರೂಪಿಸಿ, ಆ ಎಲೆಕ್ಟ್ರಿಷಿಯನ್ನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಘಟನೆಯಿಂದ ಕೋಪಗೊಂಡ ಗ್ರಾಮಸ್ಥರು ಎಲೆಕ್ಟ್ರಿಷಿಯನ್ಗೆ ಥಳಿಸಿದರು. ಅಲ್ಲಿ ಗಲಾಟೆ ಮಾಡಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಇದಕ್ಕೆ ಪರಿಹಾರ ಕಂಡುಕೊಳ್ಳಲು ಗ್ರಾಮಸ್ಥರು ಸರಪಂಚ್ ಹಾಗೂ ಇತರ ಗ್ರಾಮಸಭೆ ಸದಸ್ಯರ ಸಮ್ಮುಖದಲ್ಲಿ ಆತನ ಗೆಳತಿಯೊಂದಿಗೆ ವಿವಾಹವಾಗುವಂತೆ ಮಾಡಿದರು. ಇದರಿಂದಾದರೂ ಆತ ಇನ್ನು ತಮ್ಮ ಊರಿನಲ್ಲಿ ಕರೆಂಟ್ ಕಟ್ ಮಾಡುವುದನ್ನು ನಿಲ್ಲಿಸಬಹುದು ಎಂಬುದು ಅವರ ಉದ್ದೇಶವಾಗಿತ್ತು. “ಸರಪಂಚ್ ಮತ್ತು ಇತರ ಗ್ರಾಮ ಕೌನ್ಸಿಲ್ ಸದಸ್ಯರ ಸಮ್ಮುಖದಲ್ಲಿ ವ್ಯಕ್ತಿ ಹುಡುಗಿಯನ್ನು ಮದುವೆಯಾಗಿದ್ದಾನೆ” ಎಂದು ಗ್ರಾಮಸ್ಥ ಮಾರಾರ್ ರಾಮ್ ಮುರ್ಮು ಗುರುವಾರ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ. ಗ್ರಾಮಸ್ಥರು ಎಲೆಕ್ಟ್ರಿಷಿಯನ್ ವಿರುದ್ಧ ಯಾವುದೇ ಪೊಲೀಸ್ ಕೇಸ್ ದಾಖಲಿಸಿಲ್ಲ ಮತ್ತು ದೂರು ಬಂದರೆ ಮಾತ್ರ ಕ್ರಮಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.