ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ
ತನಗೆ ಅವಕಾಶ ನೀಡುವಂತೆ ಮುಖ್ಯಮಂತ್ರಿ ಭೇಟಿಯಾಗಿ ಮನವಿ ಸಲ್ಲಿಸಿದ ಶಕುಂತಳಾ ಟಿ. ಶೆಟ್ಟಿ..!
ಪುತ್ತೂರು: ರಾಜ್ಯ ಸರಕಾರದ ನಿಗಮ ಮತ್ತು ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವ ಪ್ರಕ್ರಿಯೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರು ಸಿದ್ಧತೆ ನಡೆಸುತ್ತಿದ್ದು, ಅಂತಿಮ ಸುತ್ತಿನ ಮಾತುಕತೆಯ ಬಳಿಕ ಆಯ್ಕೆ ನಡೆಯಲಿದೆ. ಆಯ್ಕೆ ಪ್ರಕ್ರಿಯೆ ಆರಂಭಿಸಲು ಹೈಕಮಾಂಡ್ ಗ್ರೀನ್ ಸಿಗ್ನಲ್ ಸಿಕ್ಕಿದ್ದುಈ ತಿಂಗಳಾಂತ್ಯಕ್ಕೆ ಅಧ್ಯಕ್ಷರ ಹೆಸರು ಘೋಷಣೆಯಾಗುವ ನಿರೀಕ್ಷೆ ಇದೆ. ಲೋಕಸಭಾ ಚುನಾವಣೆಯೂ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಅನುಕೂಲವಾಗುವಂತೆ ನಿಗಮ ಹಾಗೂ ಮಂಡಳಿಗಳಿಗೆ ನೇಮಕ ಮಾಡಲು ಸರಕಾರ ಇದೀಗ ಮುಂದಾಗಿದೆ. ಆಯ್ಕೆ ಪ್ರಕ್ರಿಯೆ ಇನ್ನೇನು ನಡೆಯಲಿದೆ ಎಂಬ ಮಾಹಿತಿ ದೊರೆಯುತ್ತಿರುವಂತೆಯೇ ಹಲವು ನಾಯಕರು ಪಕ್ಷದ ಪ್ರಮುಖರಿಗೆ ಒತ್ತಡ ಹಾಕಲಾರಂಭಿಸಿದ್ದಾರೆ.
ಈ ಮಧ್ಯೆ ಪುತ್ತೂರಿನ ಕಾಂಗ್ರೇಸ್ ನಾಯಕರ ನಡುವೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದ್ದು, ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ ಮತ್ತು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರ ಹೆಸರು ಕೇಳಿ ಬರುತ್ತಿದೆ. ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ತನಗೆ ಕೊಡುವಂತೆ ಶಕುಂತಳಾ ಶೆಟ್ಟಿಯವರು ಮುಖ್ಯಮಂತ್ರಿ ಸಿದ್ಧರಾಮಯ್ಯರವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿ ಮಾಡಿದ್ದಾರೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ತಾನು ಕಾಂಗ್ರೆಸ್ ಸೇರ್ಪಡೆಗೊಂಡು ಚುನಾವಣೆಗೆ ಸ್ಪರ್ಧಿಸಿದ ದಿನದಿಂದ ಇವತ್ತಿನವರೆಗೂ ತನ್ನೆಲ್ಲಾ ಕೆಲಸ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತಿರುವ ಕಾವು ಹೇಮನಾಥ ಶೆಟ್ಟಿಯವರಿಗೆ ಒಳ್ಳೆಯ ಸ್ಥಾನವನ್ನು ಒದಗಿಸಿಕೊಡಬೇಕು ಎಂದು ಪ್ರಯತ್ನಿಸುತ್ತಿರುವ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಶಕುಂತಳಾ ಶೆಟ್ಟಿಯವರ ಈ ನಿರ್ಧಾರದಿಂದ ದಿಕ್ಕು ತೋಚದಂತಾಗಿದೆ.
ತನಗೆ ಆಶೀರ್ವಾದ ಮಾಡಿರುವ ಶಕುಂತಳಾ ಶೆಟ್ಟಿಯವರನ್ನು ಬಿಡುವಂತೆಯೂ ಇಲ್ಲ, ತನ್ನ ಗೆಲುವಿಗಾಗಿ ಕಠಿಣ ಶ್ರಮ ಹಾಕಿರುವ ಹೇಮನಾಥ ಶೆಟ್ಟಿಯವರನ್ನು ಕೈಬಿಡುವಂತೆಯೂ ಇಲ್ಲ ಎಂಬ ಇಕ್ಕಟ್ಟಿಗೆ ಇದೀಗ ಶಾಸಕ ಅಶೋಕ್ ಕುಮಾರ್ ರೈ ಸಿಲುಕಿದ್ದಾರೆ ಎನ್ನಲಾಗಿದೆ. ಪಕ್ಷದ ಮುಖಂಡರ ಜತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹಲವು ಸಂಸ್ಥೆಗಳ ನಿರ್ದೇಶಕ ಸ್ಥಾನಗಳಿಗೆ ಆಯ್ಕೆ ನಡೆಯುವ ವೇಳೆ ತಮ್ಮ ಹೆಸರನ್ನೂ ಪರಿಗಣಿಸುವಂತೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ ಮತ್ತು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ ಕೆ.ಬಿ. ಅವರು ಕಾಂಗ್ರೆಸ್ ಹೈಕಮಾಂಡ್ ಕದ ತಟ್ಟಿದ್ದಾರೆ ಎನ್ನಲಾಗಿದೆ. ವಕ್ಫ್ನಲ್ಲಿ ಅವಕಾಶ ನೀಡುವಂತೆ ನೋಟರಿ ವಕೀಲ ನೂರುದ್ದೀನ್ ಸಾಲ್ಮರ ಅವರು ಹಕ್ಕೊತ್ತಾಯ ಮಂಡಿಸಿದ್ದಾರೆ. ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷತೆಗೆ ನಗರಸಭೆಯ ಮಾಜಿ ಸದಸ್ಯ ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಹೆಚ್. ಮಹಮ್ಮದ್ ಆಲಿಯವರು ಪ್ರಯತ್ನಿಸುತ್ತಿದ್ದು, ವಕೀಲರು ಮತ್ತು ನೋಟರಿಯೂ ಆಗಿರುವ ಭಾಸ್ಕರ ಗೌಡ ಕೋಡಿಂಬಾಳ ಅವರ ಹೆಸರೂ ಪುಡಾ ಅಧ್ಯಕ್ಷ ಹುದ್ದೆಗೆ ಕೇಳಿ ಬರುತ್ತಿದೆ.