ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಇದಾದ ನಂತರ ಒಂದರ ಹಿಂದೆ ಒಂದರಂತೆ ಹಲವು ನಗರಗಳಿಂದ ಇಂತಹ ಘಟನೆಗಳು ಬೆಳಕಿಗೆ ಬಂದಿದ್ದವು. ಇದೀಗ ಜಮ್ಮು-ಕಾಶ್ಮೀರದಲ್ಲಿ ಮಹಿಳಾ ವೈದ್ಯೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ವರದಿಯಾಗಿದ್ದು, ಕೊಲೆ ಬಳಿಕ ಆರೋಪಿ ಆತ್ಮಹತ್ಯೆಗೆ ಯತ್ನಿಸಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಸುದ್ದಿ ಮೂಲಗಳು ತಿಳಿಸಿದೆ.
ಪೊಲೀಸ್ ಮೂಲಗಳ ಪ್ರಕಾರ, ಜಮ್ಮುವಿನ ತಲಾಬ್ ಟಿಲ್ಲೋದ ವೈದ್ಯೆ ಸುಮೇಧಾ ಶರ್ಮಾ ಮೃತಪಟ್ಟ ಯುವತಿ. ಆಕೆಯ ಗೆಳೆಯ ಜೋಹರ್ ಮೊಹಮ್ಮದ್ ಗನೈ. ಆರೋಪಿಯ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಆರೋಪಿ ಜೋಹರ್ ಗನೈ ವೈಯಕ್ತಿಕ ಕಾರಣಗಳಿಂದ ತನ್ನ ಜೀವನವನ್ನು ಕೊನೆಗೊಳಿಸುವುದಾಗಿ ಫೇಸ್ಬುಕ್ನಲ್ಲಿ ಪೋಸ್ಟ್ ಬರೆದಿದ್ದಾನೆ ಎಂದು ಪೊಲೀಸರಿಗೆ ತಿಳಿಸಲಾಗಿದೆ.
ಮಾಹಿತಿ ಪಡೆದ ಪೊಲೀಸರು ಜಮ್ಮುವಿನ ಜಾನಿಪುರದಲ್ಲಿರುವ ಜೋಹರ್ ಮನೆಗೆ ತೆರಳಿದಾ ನಿಜಾಂಶ ಬಯಲಾಗಿದೆ. ಮನೆಯ ಗೇಟು ಹೊರಗಿನಿಂದ ಮುಚ್ಚಿತ್ತು. ಪೊಲೀಸರು ಮನೆಗೆ ಪ್ರವೇಶಿಸಿದಾಗ, ಮಹಿಳಾ ವೈದ್ಯೆ ಸುಮೇಧಾ ಅವರ ದೇಹವು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಪೊಲೀಸರು ತನಿಖೆ ನಡೆಸಿ ಮೃತ ಮಹಿಳಾ ವೈದ್ಯೆಯ ಶವವನ್ನು ಆಕೆಯ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಆರೋಪಿಯ ಸ್ಥಿತಿ ಚಿಂತಾಜನಕವಾಗಿದ್ದು, ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೊಲೀಸರು ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ವಿಚಾರದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ.
ಒಂದೇ ಕಾಲೇಜಿನಲ್ಲಿ ಓದುತ್ತಿದ್ದ ಸುಮೇಧಾ ಶರ್ಮಾ ಮತ್ತು ಜೋಹರ್..!
ಮೃತ ಸುಮೇಧಾ ಶರ್ಮಾ ಮತ್ತು ಜೋಹರ್ ಇಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು.ಇಬ್ಬರೂ ಜಮ್ಮುವಿನ ಡೆಂಟಲ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ (BDS) ಪೂರೈಸಿದ್ದಾರೆ. ಈಗ ಸುಮೇಧಾ ಶರ್ಮಾ ಜಮ್ಮು ಮತ್ತು ಕಾಶ್ಮೀರದ ಹೊರಗಿನ ಕಾಲೇಜಿನಲ್ಲಿ ಎಂಡಿಎಸ್ ಮಾಡುತ್ತಿದ್ದಳು.
ಜಗಳ ಕೊಲೆಯಲ್ಲಿ ಅಂತ್ಯ..!
ಸುಮೇಧಾ ಅವರು ಹೋಳಿ ರಜೆಯಲ್ಲಿ ಜಮ್ಮುವಿಗೆ ಬಂದಿದ್ದು, ಮಾರ್ಚ್ 7 ರಂದು ಜಾನಿಪುರದಲ್ಲಿರುವ ತನ್ನ ಗೆಳೆಯ ಜೋಹರ್ ಮನೆಗೆ ಹೋಗಿದ್ದರು, ಅಲ್ಲಿ ಅವರು ಕೆಲವು ಕಾರಣಗಳಿಗಾಗಿ ಜಗಳವಾಡಿದ್ದಾರೆ. ಈ ಸಮಯದಲ್ಲಿ ಜೋಹರ್ ಅಡುಗೆ ಮನೆಯಿಂದ ಚಾಕುವನ್ನು ತಂದು ಸುಮೇಧಾಗೆ ಇರಿದಿದ್ದಾನೆ. ನಂತರ ಚಾಕುವಿನಿಂದ ತಾನು ಇರಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಸುದ್ದಿವಾಹಿನಿಗಳು ವರದಿ ಮಾಡಿದೆ.
ಇನ್ನು ಹಿಂದೂ ಯುವತಿಯ ಕೊಲೆಗೆ ಲವ್ ಜಿಹಾದ್ ಕಾರಣ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಕೃತ್ಯವನ್ನು ಅಲ್ಲಿನ ಹಿಂದೂ ಸಂಘಟನೆಗಳು ತೀವ್ರವಾಗಿ ವಿರೋಧಿಸಿದೆ.