ಇರಾ: ಜನ ಶಿಕ್ಷಣ ಟ್ರಸ್ಟ್, ದಿ ಹಂಗರ್ ಪ್ರಾಜೆಕ್ಟ್ , ಸುಗ್ರಾಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾಂತ್ವನ ಕೇಂದ್ರ ಬಂಟ್ವಾಳ’ ಇರಾ ಗ್ರಾಮ ಪಂಚಾಯತ್ ಇದರ ಸಹಯೋಗದಲ್ಲಿ ಇರಾ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಜಾಗ್ರತಿ ವೇದಿಕೆ ಸಭೆ ‘ಮಹಿಳಾ ದೌರ್ಜನ್ಯ ಮುಕ್ತಿ ಜಾಗೃತಿ ಅರಿವು’ ಕಾರ್ಯಕ್ರಮ ನಡೆಯಿತು.
ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸ್ವಚ್ಛತಾ ರಾಯಭಾರಿ ಮಾಜಿ ಒಂಬುಡ್ಸ್ ಮೆನ್ ಶೀನ ಶೆಟ್ಟಿ ಮಾತನಾಡಿ ಮಹಿಳೆಯರು ಹೆಚ್ಚು ಸಂಘಟನೆಗಳಲ್ಲಿ ಭಾಗಿಯಾಗುವುದು ಒಗ್ಗಟ್ಟು ಪ್ರದರ್ಶಿಸುವುದು ಮತ್ತು ಮಾತನಾಡುವ ಮತ್ತು ಪ್ರಶ್ನಿಸುವುದುನ್ನು ಕಲಿತುಕೊಂಡಾಗ ಮಹಿಳೆಯರ ಮೇಲಿನ ದೌರ್ಜನ್ಯ ಕಿರುಕುಳಗಳಂತಹ ಪ್ರಕರಣಗಳನ್ನು ಮಹಿಳೆಯರೇ ಸ್ವತಃ ತಡೆಗಟ್ಟಲು ಸಾಧ್ಯವಿದೆ ಎಂದರು. ಅದೇ ರೀತಿ ಉದ್ಯೋಗ ಖಾತರಿಯಡಿ ಇರುವಂಥ ಯೋಜನೆಗಳು ಹಾಗೂ ಒಂದು ಕುಟುಂಬ ಎರಡೂವರೆ ಲಕ್ಷದಷ್ಟು ಆಸ್ತಿ ಸೃಜನೆ ಮಾಡಿಕೊಳ್ಳಲು ನರೇಗದಡಿ ಅವಕಾಶವಿದೆ ಎಂದರು.
ಜನಶಿಕ್ಷಣ ಟ್ರಸ್ಟ್ ನ ಸಂಯೋಜಕ ಚೇತನ್ ಮಾತನಾಡಿ ಗ್ರಾಮ ಪಂಚಾಯತ್ ನಲ್ಲಿ ನಡೆಯುವಂಥ ವಾರ್ಡ್ ಸಭೆ ಗ್ರಾಮ ಸಭೆಗಳು ಮತ್ತು ಪಂಚಾಯತ್ ಸಮಿತಿಗಳು ಬಲಗೊಂಡಾಗ ದೌರ್ಜನ್ಯಗಳಂಥ ಪ್ರಕರಣಗಳನ್ನು ಗ್ರಾಮ ಪಂಚಾಯತ್ ಮಟ್ಟದಲ್ಲೇ ಹತೋಟಿಗೆ ತರಲು ಸಾಧ್ಯವಿದೆ ಎಂದರು. ಮಹಿಳಾ ಸಾಂತ್ವನ ಕೇಂದ್ರದ ಸಮಾಜ ಕಾರ್ಯಕರ್ತೆ ಸೌಮ್ಯ ಅವರು ಸಾಂತ್ವನ ಸೇವೆಗಳು ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ನೀಡುವಂಥ ಸೇವೆಗಳ ಬಗ್ಗೆ ಮತ್ತು ಮಹಿಳಾ ಸಹಾಯವಾಣಿ ಬಗ್ಗೆ ಮಾಹಿತಿ ನೀಡಿದರು.
ಇರಾ ಗ್ರಾಮ ಪಂಚಾಯತ್ ನ ಅಧ್ಯಕ್ಷ ಆ್ಯಗ್ನೆಸ್ ಡಿಸೋಜಾ ಅವರು ಗ್ರಾಮ ಪಂಚಾಯತಿಗಳಲ್ಲಿ ಸಿಗುವಂತಹ ಸೌಲಭ್ಯಗಳು ಪಡೆಯವಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ಮಹಿಳೆಯರು ಹೆಚ್ಚು ತೊಡಗಿಕೊಳ್ಳಬೇಕು ಯಾವುದೇ ಸಮಸ್ಯೆಗಳಿದ್ದಲ್ಲಿ ನೇರವಾಗಿ ಗ್ರಾಮ ಪಂಚಾಯತಿಗಳನ್ನು ಭೇಟಿಯಾಗಿ ಸಮಸ್ಯೆಯನ್ನು ಪರಿಹರಿಸಿ ಕೊಲ್ಲುವಂಥ ಯೋಜನೆ ರೂಪಿಸಬೇಕು ಎಂದರು. ಸಭೆಯಲ್ಲಿ ಗ್ರಾಮ ಪಂಚಾಯತ್ ನ ಸದಸ್ಯರಾದ ಶರ್ಮಿಲಾ ನಳಿನಾಕ್ಷಿ ಚಂದ್ರಪ್ರಭಾ ವಾಣಿಶ್ರೀ ಹಾಗೂ ಇರಾ ಗ್ರಾಮ ಪಂಚಾಯತ್ ನ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಪಂಚಾಯತ್ ಸಿಬ್ಬಂದಿ ನಳಿನಿ ಹಾಗೂ ಗಿರಿಯಪ್ಪ ಸಹಕರಿಸಿದರು