ಬಂಟ್ವಾಳ: ಹತ್ತಾರು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಬಹುಬೇಡಿಕೆಯ ಸೇತುವೆ ಎನಿಸಿಕೊಂಡಿರುವ ಮೂಲರಪಟ್ನ ಸೇತುವೆ ಕಾಮಗಾರಿ ಅಂತಿಮಗೊಂಡಿದ್ದು, ಇಂದಿನಿಂದ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ಉಳಿಪ್ಪಾಡಿಗುತ್ತು ಅವರು ತಿಳಿಸಿದ್ದಾರೆ.
ಸುಮಾರು 13 ಕೋ.ರೂ.ವೆಚ್ಚದ ಈ ಸೇತುವೆಯ ಕಾಮಗಾರಿ ಪೂರ್ಣಗೊಂಡಿದ್ದು ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಮಂಗಳೂರು ಹಾಗೂ ಬಂಟ್ವಾಳ ತಾಲೂಕನ್ನು ಬೆಸೆಯುವ ಮೂಲರಪಟ್ನಸೇತುವೆಯು 2018ರಲ್ಲಿ ಏಕಾಏಕಿ ಮಳೆಗೆ ಕುಸಿದಿದ್ದು, ಎರಡೂ ಭಾಗದ ಸಂಪರ್ಕ ಕೊಂಡಿ ಕಡಿತಗೊಂಡಿತ್ತು. ಸೇತುವೆ ಇಲ್ಲದೆ ಈ ಭಾಗದ ಬಸ್ಸು ಸಂಪರ್ಕ, ವಾಹನ ಸಂಚಾರ ಕಡಿತಗೊಂಡು ಸಾರ್ವಜನಿಕರು ಸಾಕಷ್ಟು ತೊಂದರೆಗೊಳಗಾಗಿದ್ದರು. ಆದರೆ ಇದೀಗ ಸೇತುವೆಯ ಕಾಮಗಾರಿ ಮುಕ್ತಾವಾಗಿದೆ.
ಮೂಲರಪಟ್ನ ಸೇತುವೆ ಬಿದ್ದ ಬಳಿಕ ತೂಗು ಸೇತುವೆಯ ಮೂಲಕ ಜನ ಸಾಗುತ್ತಿದ್ದರು. ಆದರೆ ವಾಹನಗಳು ಸುತ್ತು ಬಳಸಿ ಸಾಗಬೇಕಿತ್ತು. ಹಳೆ ಸೇತುವೆ ಬಿದ್ದ ಬಳಿಕವೂ ಹಲವು ಸಮಯಗಳವರೆಗೆ ಅದರ ಅವಶೇಷಗಳು ಹಾಗೇ ಉಳಿದುಕೊಂಡಿತ್ತು. ಬಳಿಕ ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಅದರ ಅವಶೇಷ ತೆರವುಗೊಂಡಿತ್ತು. ಬೇಸಗೆಯಲ್ಲಿ ನದಿಯ ಮಧ್ಯದಲ್ಲಿ ಮಣ್ಣು ತುಂಬಿಸಿ ರಸ್ತೆ ಮಾಡಲಾಗುತ್ತಿದ್ದು, ಲಘು ವಾಹನಗಳು ಸಂಚಾರ ನಡೆಸುತ್ತಿದ್ದವು. ಆದರೆ ಮಳೆ ಆರಂಭವಾಗಿ ನದಿಯಲ್ಲಿ ನೀರು ಬಂದಾಗ ರಸ್ತೆ ಕೊಚ್ಚಿ ಹೋಗುತ್ತಿತ್ತು. ಸೇತುವೆಯ ಗುತ್ತಿಗೆ ನಿರ್ವಹಣೆಯ ಕಾಮಗಾರಿಯನ್ನು ಸ್ಥಳೀಯ ಮುಗ್ರೋಡಿ ಕನ್ಸ್ಟ್ರಕ್ಷನ್ಸ್ ಕಂಪೆನಿ ನಿರ್ವಹಿಸುತ್ತಿರುವುದರಿಂದ ಕಾಮಗಾರಿ ವೇಗವಾಗಿ ಸಾಗಿ ಜನರಿಗೆ ಅನುಕೂಲವಾಗುವಂತೆ ಸಂಚಾರಕ್ಕೆ ಮುಕ್ತವಾಗಿದೆ.