ಬಂಟ್ವಾಳ: ಯುವತಿಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಬೊಂಡಾಲದಲ್ಲಿ ನಡೆಸಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಗೊಳ್ತಮಜಲು ಗ್ರಾಮದ ಕಲ್ಲಡ್ಕ ನಿವಾಸಿ ನಾಗವೇಣಿ ಅವರ ಪುತ್ರಿ ಮಲ್ಲಿಕಾ (32) ಎಂದು ಗುರುತಿಸಲಾಗಿದೆ.
ಮಲ್ಲಿಕಾ ಅವರು ಕಳೆದ 10 ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಯಿಂದ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ನಾಗವೇಣಿ ಅವರು ಮೂಲತಃ ಕಲ್ಲಡ್ಕದ ಉಮಾಶಿವ ಕ್ಷೇತ್ರದ ಸಮೀಪದಲ್ಲಿ ವಾಸವಾಗಿದ್ದು, ಪ್ರಸ್ತುತ ಅಲ್ಲಿ ಹಳೆಯ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. ಆ ಕಾರಣದಿಂದ ಇವರು ಬೊಂಡಾಲದ ಕಾಪಿಕಾಡು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಇನ್ನು ಇವರ ಹಿರಿಯ ಮಗಳು ಕೆಲಸಕ್ಕೆ ಪಾಣೆಮಂಗಳೂರಿಗೆ ತೆರಳಿದ ವೇಳೆ ತಾಯಿ ನಾಗವೇಣಿ ಅವರು ಕಲ್ಲಡ್ಕ ಮನೆ ಕೆಲಸದ ಬಗ್ಗೆ ನೋಡಿ ಬರಲು ಹೋಗಿದ್ದರು. ಆ ಸಮಯದಲ್ಲಿ ಮಲ್ಲಿಕಾ ಒಬ್ಬಳೇ ಮನೆಯಲ್ಲಿದ್ದಳು. ಕಲ್ಲಡ್ಕಕ್ಕೆ ಹೋಗಿ ವಾಪಾಸು ಬಂದು ನೋಡುವಾಗ ಮಗಳು ಕಾಣೆಯಾಗಿದ್ದು, ಹುಡುಕಾಡಿದಾಗ ಮನೆಯ ಸಮೀಪದ ಬಾವಿಯಲ್ಲಿ ಶವ ಪತ್ತೆಯಾಗಿದೆ.
ಮಾನಸಿಕ ಅಸ್ವಸ್ಥತೆಯ ಕಾರಣದಿಂದ ಇವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಪೋಲಿಸ್ ಇನ್ಸ್ ಸ್ಪೆಕ್ಟರ್ ವಿವೇಕಾನಂದ, ಎಸ್.ಐ.ಅವಿನಾಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.