ಬಂಟ್ವಾಳ: ರಿಕ್ಷಾವೊಂದಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನನ್ನು ಮೆಲ್ಕಾರ್ ಟ್ರಾಫಿಕ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೊಹಮ್ಮದ್ ಶೇಕ್ ಫೈಝಿಲ್ ಎಂಬಾತ ಆರೋಪಿಯಾಗಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆಯ ವಿವರ:
ಡಿ.5 ರಂದು ಬೆಳಿಗ್ಗೆ 8 ಗಂಟೆಯ ಸುಮಾರಿಗೆ ತಲಪಾಡಿ ಎಂಬಲ್ಲಿ ಬಿಸಿರೋಡಿನಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ರಿಕ್ಷಾಕ್ಕೆ ಹಿಂಬದಿಯಿಂದ ಕಾರೊಂದು ಡಿಕ್ಕಿಯಾಗಿ ಪರಾರಿಯಾಗಿತ್ತು. ಡಿಕ್ಕಿಯಾದ ರಭಸಕ್ಕೆ ರಿಕ್ಷಾ ಪಲ್ಟಿಯಾಗಿ ರಿಕ್ಷಾ ಚಾಲಕ ಪುರುಷೋತ್ತಮ ಹಾಗೂ ಪ್ರಯಾಣಿಕ ಹೃತಿಕ ಎಂಬರಿಗೆ ಗಾಯವಾಗಿತ್ತು. ಗಾಯಗೊಂಡವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಿಕ್ಷಾ ಪಲ್ಟಿಯಾದ ಆರಂಭದಲ್ಲಿ ಘಟನೆಗೆ ಕಾರಣವೇನು ಎಂಬುದು ಅಸ್ಪಷ್ಟವಾಗಿತ್ತು. ಬಳಿಕ ಗಾಯಳುಗಳು ನೀಡಿದ ಮಾಹಿತಿಯಂತೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದು ಪರಾರಿಯಾದ ಬಗ್ಗೆ ಮಾಹಿತಿ ಲಭ್ಯವಾಯಿತು.
ಕೂಡಲೇ ಕಾರ್ಯಪ್ರವೃತ್ತರಾದ ಟ್ರಾಫಿಕ್ ಪೊಲೀಸರು ಸ್ಥಳೀಯ ಸಿ.ಸಿ.ಕ್ಯಾಮರಾ ಗಳನ್ನು ಪರಿಶೀಲನೆ ನಡೆಸಿದಾಗ ಕಾರಿನ ನಂ ಲಭ್ಯವಾಯಿತು. ಕಾರು ಅಪಘಾತಗೊಳಿಸಿದ ಬಳಿಕ ತಪ್ಪಿಸುವ ಸಲುವಾಗಿ ಬೇರೆ ಬೇರೆ ರಸ್ತೆಗಳ ಮೂಲಕ ಸಂಚಾತ ಮಾಡಿದ ಬಗ್ಗೆ ಪೊಲೀಸರಿಗೆ ಸಾಕ್ಷಿ ಲಭ್ಯವಾಗಿತ್ತು. ಸಿಸಿ ಕ್ಯಾಮರಾ ದ ಕಣ್ಗಾವಲಿನಿಂದ ತಪ್ಪಿಸುವ ಸಲುವಾಗಿ ಬಿಸಿರೋಡಿನ ಮೊಡಂಕಾಪು ಇತರ ಕಡೆಗಳಲ್ಲಿ ಸುತ್ತಾಡಿ ಬಳಿಕ ಶಾಂತಿಅಂಗಡಿ ಮನೆಗೆ ತೆರಳಿದ ಬಗ್ಗೆ ಮಾಹಿತಿ ಆದರಿಸಿ ಬಳಿಕ ಸುಮಾರು ದಿನದ ಬಳಿಕ ಆರೋಪಿ ಹಾಗೂ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣದ ತನಿಖಾಧಿಕಾರಿಯಾದ ರಾಜು ಹಾಗೂ ತನಿಖಾ ಸಹಾಯಕರಾದ ನಾಗೇಸ್ ಕೆ.ಸಿ. ಅವರು ಅರೋಪಿ ಹಾಗೂ ಕಾರನ್ನು ಪತ್ತೆಹಚ್ಚಿದ್ದಾರೆ.