ಬೆಂಗಳೂರು ವಿ.ವಿಯ ಜ್ಞಾನಭಾರತಿ ಆವರಣದಲ್ಲಿ ಬಸ್ ಹತ್ತುವಾಗ ಆಯತಪ್ಪಿ ಬಿದ್ದ ವಿದ್ಯಾರ್ಥಿನಿ ಮೇಲೆ ಬಿಎಂಟಿಸಿ ಬಸ್ ಹರಿದು ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಶಿಲ್ಪಾಶ್ರೀ 14ದಿನಗಳ ನಂತರ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾಳೆ.
ಅಪಘಾತವಾದ ಕೂಡಲೇ ವಿದ್ಯಾರ್ಥಿನಿಯನ್ನು ಬನ್ನೇರುಘಟ್ಟದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದುವರೆಗೂ 7 ಸರ್ಜರಿ ನಡೆಸಿದರೂ ಸಹ ಆಕೆಯ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ದಾಸರಹಳ್ಳಿಯ ಶಿಲ್ಪಶ್ರೀ (22) ಬೆಂಗಳೂರಿನ ವಿವಿಯಲ್ಲಿ ಪ್ರಥಮ ವರ್ಷದ ಎಂಎಸ್ಸಿ ಅಧ್ಯಯನ ಮಾಡುತ್ತಿದ್ದರು. ಅಕ್ಟೋಬರ್ 10 ರಂದು ಬಸ್ ಹತ್ತುವಾಗ ಬಸ್ ಚಲಿಸಿದ್ದರಿಂದ ವಿದ್ಯಾರ್ಥಿನಿ ಕೆಳಗೆ ಬಿದ್ದು, ಹಿಂಭಾಗದ ಚಕ್ರ ಹರಿದಿದೆ, ಬಸ್ ಚಾಲಕ ಅಜಾಗರೂಕತೆಯಿಂತ ಚಾಲನೆ ಮಾಡಿದರಿಂದ ಅಪಘಾತ ಸಂಭವಿಸಿದೆ ಎಂದು ಆರೋಪಿಸಿರುವ ಬೆಂಗಳೂರು ವಿ.ವಿ ವಿದ್ಯಾರ್ಥಿಗಳು ಮೂರು ದಿನಗಳ ಪ್ರತಿಭಟನೆ ನಡೆಸಿದ್ದರು.
ಬೆಂಗಳೂರು ವಿವಿಯ ಒಳಗೆ ಖಾಸಗಿ ವಾಹನಗಳ ಪ್ರವೇಶವನ್ನು ನಿಷೇಧಿಸಬೇಕು. ವಿ.ವಿ ವತಿಯಿಂದಲೇ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದರು. ಈ ಕುರಿತು ಹಲವು ಸುತ್ತಿನ ಮಾತುಕತೆಗಳು ಸಹ ನಡೆಸಿದ್ದರು. ಬಸ್ ಚಾಲಕ ಮತ್ತು ನಿರ್ವಾಹಕನನ್ನು ಬಂಧಿಸಲಾಗಿದೆ.
ಸದ್ಯ ವಿದ್ಯಾರ್ಥಿನಿಯ ಸಾವಿನ ಸುದ್ದಿ ಹೊರಬರುತ್ತಿದ್ದಂತೆ ಬೆಂಗಳೂರು ವಿವಿಯಲ್ಲಿ ಮತ್ತೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.