ಕಲೋತ್ಸವ ಫೆ.19 ರ ತನಕ ಮುಂದುವರಿಯಲಿದೆ, ಇಬ್ರಾಹಿಂ ಕೈಲಾರ್
ಬಂಟ್ವಾಳ : ಜಾಯಿಂಟ್ ವೀಲ್ನಿಂದ ಬಾಲಕಿಯೋರ್ವಳು ಕೆಳಗೆ ಬಿದ್ದಿದ್ದಾಳೆ ಹೀಗೊಂದು ಸುದ್ದಿ ಕಳೆದ ಎರಡು ದಿನಗಳಿಂದ ಬಂಟ್ವಾಳ ಪರಿಸರದಲ್ಲಿ ಹರಿದಾಡುತ್ತಿದೆ.
ಬಿ.ಸಿ.ರೋಡಿನ ವೃತ್ತದ ಬಳಿಯ ಮೈದಾನದಲ್ಲಿ ಕೆಲವು ದಿನಗಳಿಂದ ನಡೆಯುತ್ತಿರುವ ಕರಾವಳಿ ಕಲೋತ್ಸವ ಕಾರ್ಯಕ್ರಮದಲ್ಲಿ ಜಾಯಿಂಟ್ ವೀಲ್ ನಿಂದ ಬಾಲಕಿ ಬಿದ್ದು ಗಾಯವಾಗಿದೆ ಎಂಬ ವಾಯಿಸ್ ಮೇಸೇಜ್ ಜೊತೆ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ. ಇದರ ಜೊತೆಗೆ ಇದು ಇಂದು ಬಿ.ಸಿ.ರೋಡ್ ನಲ್ಲಿ ನಡೆದ ಘಟನೆಯಾಗಿದೆ ಎಂದು ಮಹಿಳೆಯೋರ್ವರ ವಾಯಿಸ್ ಮೆಸೇಜ್ ನಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿನ್ನದ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಸಂಚಾಲಕ ಮೋಹನ್ ದಾಸ್ ಕೊಟ್ಟಾರಿ ಇಂತಹ ಯಾವುದೇ ಘಟನೆಗಳು ಇಲ್ಲಿ ನಡೆದಿಲ್ಲ ಎಂದು ಸ್ಪಷ್ಟಣೆ ನೀಡಿದ್ದಾರೆ.
ಈ ರೀತಿಯ ಸುಳ್ಳು ಸಂದೇಶಗಳನ್ನು ಕಳುಹಿಸಿ ಜನರನ್ನು ಗೊಂದಲ ಪಡಿಸುವುದರ ಮೂಲಕ ಕರಾವಳಿ ಕಲೋತ್ಸವ ಕಾರ್ಯಕ್ರಮವನ್ನು ಹಾಳುಗೆಡವುವ ದುರುದ್ದೇಶದಿಂದ ಮುಂಬಯಿದಲ್ಲಿ ಈ ಹಿಂದೆ ನಡೆದಿದೆ ಎನ್ನಲಾಗಿರುವ ವಿಡಿಯೋವನ್ನು ಎಡಿಟ್ ಮಾಡಿ ಬಿಸಿರೋಡಿನಲ್ಲಿ ವೈರಲ್ ಮಾಡಲಾಗುತ್ತಿದೆ. ಇದರ ವಿರುದ್ದ ಈಗಾಗಲೇ ಸೈಬರ್ ಕ್ರೈಮ್ ಗೆ ದೂರು ನೀಡಲಾಗಿದೆ, ಇಂತಹ ವ್ಯಕ್ತಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಲೋತ್ಸವ ಫೆ.19ರ ತನಕ ಮುಂದೂಡಲಾಗಿದೆ. ಫೆ. 08 ರ ತನಕ ನಿಗದಿಯಾಗಿದ್ದ ಕಲೋತ್ಸವ ಕಾರ್ಯಕ್ರಮವು ಬಹುಜನರ ಅಪೇಕ್ಷೆ ಮೇರೆಗೆ ಫೆ.19 ರ ತನಕ ಮುಂದುವರಿಯಲಿದೆ ಎಂದು ಚಿನ್ನರ ಲೋಕ ಸೇವಾ ಬಂಧು ಉಪಾಧ್ಯಕ್ಷ ಇಬ್ರಾಹಿಂ ಕೈಲಾರ್ ತಿಳಿಸಿದ್ದಾರೆ.
ಫೆ.11 ರಂದು ಸಂಜೆ ಚಿಣ್ಣರೋತ್ಸವ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು ಫೆ.19 ರ ತನಕ ಪ್ರತಿದಿನ ಸಂಜೆ 7 ರಿಂದ ವಿವಿಧ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದವರು ತಿಳಿಸಿದ್ದಾರೆ.