ಮಂಗಳೂರಿನ ಪಚ್ಚನಾಡಿ ಭಾಗದ ಜನರು ನಾಯಿಗಳ ಕಾಟದಿಂದ ಬೇಸತ್ತಿದ್ದರು. ಪ್ರತಿದಿನ ಅವರಿಗೆ ಬೀದಿ ನಾಯಿಗಳ ಜೊತೆಗೆ ಮರಿ ನಾಯಿಗಳದ್ದೇ ಕಿರಿಕಿರಿಯಾಗಿತ್ತು. ತಮ್ಮ ಊರಿನಲ್ಲಿ ನಾಯಿಮರಿಗಳನ್ನು ಬಿಡುವ ಸಾರ್ವಜನಿಕರ ವರ್ತನೆಗೆ ರೋಸಿಹೋಗಿದ್ದ ಜನ ಈಗ ಶಾಶ್ವತ ಪರಿಹಾರದತ್ತ ದೃಷ್ಟಿ ಹಾಯಿಸಿದ್ದಾರೆ.
“ಇಲ್ಲಿ ಯಾರು ನಾಯಿಮರಿ ಮತ್ತು ಬೆಕ್ಕು ಮರಿಗಳನ್ನು ತಂದು ಬಿಡುತ್ತಾರೆಯೋ ಅವರು ತಮ್ಮ ಹೆಂಡತಿ ಮಕ್ಕಳನ್ನು ತಂದು ಬಿಡಿ ಸಾಕುತ್ತೇವೆ” ಎಂದು ಒಂದೇ ಒಂದು ವಾಕ್ಯದ ಬ್ಯಾನರ್ನಲ್ಲಿ ಬರೆಸಿದ್ದಾರೆ. ಈ ಒಂದೇ ಒಂದು ವಾಕ್ಯ ಇದೀಗ ನಾಯಿ ಕಾಟವನ್ನು ತಪ್ಪಿಸಿದೆ. ಈ ಕಠೋರ ವಾಕ್ಯದ ಬ್ಯಾನರ್ ಕಂಡಿರುವುದು ಮಂಗಳೂರಿನ ಪಚ್ಚನಾಡಿ ಎಂಬಲ್ಲಿ. ಪಚ್ಚನಾಡಿಯ ಮಂಗಳ ಜ್ಯೋತಿ ಪ್ರದೇಶದಲ್ಲಿ ಸಾರ್ವಜನಿಕರು ಪುಟ್ಟ ಪುಟ್ಟ ನಾಯಿಮರಿಗಳನ್ನು ಬಿಡುತ್ತಿದ್ದರು. ಇದರಿಂದ ರೋಸಿ ಹೋದ ಜನರು, ಈಗ ಮಂಗಳಜ್ಯೋತಿಯಲ್ಲಿ ಈ ಬ್ಯಾನರ್ ಅಳವಡಿಸಿದ್ದಾರೆ.
ಮೊದಲೇ ತಾಜ್ಯ ಸಂಸ್ಕರಣಾ ಘಟಕದಿಂದ ಪಚ್ಚನಾಡಿ ಭಾಗದಲ್ಲಿ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದ್ದು, ಇದರ ಜೊತೆಗೆ ಸಾರ್ವಜನಿಕರು ಪುಟ್ಟ ನಾಯಿ ಮತ್ತು ಬೆಕ್ಕಿನ ಮರಿಯನ್ನೂ ಬಿಡುತ್ತಿದ್ದರಿಂದ ಜನ ಕಿರಿ ಕಿರಿ ಅನುಭವಿಸುತ್ತಿದ್ದರು. ಎಷ್ಟೇ ಪ್ರಯತ್ನ ಪಟ್ಟರೂ ಜನ ನಾಯಿ ಮರಿಗಳನ್ನು ರಸ್ತೆಯ ಬದಿಯಲ್ಲಿ ಬಿಡುವ ಕೆಲಸ ನಿಲ್ಲಿಸದಿರುವುದರಿಂದ ಈ ಈ ಬ್ಯಾನರ್ ಅನ್ನು ಅಳವಡಿಸಲಾಗಿದೆ.
ಮಂಗಳ ಜ್ಯೋತಿ ಪ್ರದೇಶದಲ್ಲಿ ಮಂಗಳಜ್ಯೋತಿ ಶಾಲೆಯಿರೋದರಿಂದ ಸುಮಾರು 200ಕ್ಕೂ ಅಧಿಕ ಮಕ್ಕಳು ಬೀದಿ ನಾಯಿ ಕಾಟವನ್ನು ಅನುಭವಿಸುತ್ತಿದ್ದಾರೆ. ಅಲ್ಲದೇ ಶಾಲೆಯ ಒಳಗಿರುವ ಮಕ್ಕಳ ಮೇಲೂ ದಾಳಿ ಮಾಡುತ್ತಿವೆ. ನಾಯಿಗಳ ದಾಳಿಯಿಂದ ಈಗಾಗಲೇ ಕೆಲವು ಮಕ್ಕಳು ಗಾಯಗೊಂಡಿರುವ ಘಟನೆಯೂ ನಡೆದಿದೆ. ಶಾಲೆಯ ಮುಂಭಾಗದಲ್ಲೇ ಸದ್ಯ ಈ ಬ್ಯಾನರ್ ಅನ್ನು ಅಳವಡಿಸಲಾಗಿದ್ದು, ಇನ್ನಾದರೂ ಜನರು ನಾಯಿ ಮರಿಗಳನ್ನು ಈ ಭಾಗದಲ್ಲಿ ಬಿಡುವುದು ಕಡಿಮೆ ಆಗುತ್ತದೆಯೋ ಅನ್ನುವುದನ್ನು ಕಾದುನೋಡಬೇಕಿದೆ.