ಬೆಳ್ತಂಗಡಿ: ಅಮಲು ಪದಾರ್ಥ ಸೇವಿಸಿ ಹೆಂಡತಿಗೆ ಹಲ್ಲೆ ಮಾಡಿ ಕಾಲು ಮುರಿದ ಘಟನೆ ಬೆಳ್ತಂಗಡಿಯ ನಾವೂರಿನಲ್ಲಿ ನಡೆದಿದೆ. ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿ ಕಳೆದ 10 ವರ್ಷಗಳಿಂದ ಗಂಡನ ಜತೆ ಸಂಸಾರ ನಡೆಸುತ್ತಿದ್ದ ನಾವೂರು ಗ್ರಾಮದ ಜನತಾ ಕಾಲನಿಯ ಸೈನಾಝ್ (27) ಮತ್ತು ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಕಲ್ಲಾಜೆ ನಿವಾಸಿ ಅಬ್ದುಲ್ ಆರಿಫ್ (29), 2012 ರಲ್ಲಿ ನಾವೂರಿನ ಮುರ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪ್ರಾರಂಭದ ವರ್ಷಗಳಲ್ಲಿ ಪತಿ- ಪತ್ನಿ ಅನ್ಯೋನ್ಯವಾಗಿದ್ದರು. ಕ್ರಮೇಣ ಪತಿ ಆರಿಫ್ ಅಮಲು ಪದಾರ್ಥ ಸೇವಿಸಿ ಪತ್ನಿ ಜತೆ ಗಲಾಟೆ ಮಾಡುತ್ತಾ ಹಲ್ಲೆ ಮಾಡಲು ಆರಂಭಿಸಿದ್ದಾನೆ.
ಈ ವಿಚಾರ ತಿಳಿದು ಎರಡು ಮನೆಯವರು ಸಂಧಾನ ಮಾಡಿದ ಬಳಿಕ ನಡ ಗ್ರಾಮದ ಕುತ್ತೊಟ್ಟು ಎಂಬಲ್ಲಿ ಬಾಡಿಗೆ ಮನೆ ಮಾಡಿ ವಾಸವಿದ್ದರು. ಆರಿಫ್ ಗುರುವಾಯನಕೆರೆ ಮರದ ಮಿಲ್ನಲ್ಲಿ ಕೆಲಸ ಮಾಡುತ್ತಿದ್ದಾನೆ. ಇದೇ ಡಿಸೆಂಬರ್ 11 ರಂದು ಸಂಜೆ 5 ಗಂಟೆಗೆ ಆರಿಫ್ ಇಂದಬೆಟ್ಟುವಿನ ಕಲ್ಲಾಜೆ ತಾಯಿ ಮನೆಗೆ ಹೋಗೋಣ ಎಂದು ಬೈಕ್ ನಲ್ಲಿ ಹೆಂಡತಿ ಮಕ್ಕಳನ್ನು ಕೂರಿಸಿಕೊಂಡು ಹೊರಟಿದ್ದಾನೆ. ನಾವೂರು ತಲುಪಿದಾಗ ಬೈಕ್ ಕೆಟ್ಟು ಹೋಗಿದೆ, ನಿನ್ನ ಅಣ್ಣ ಹಮೀದ್ ಮನೆಗೆ ಹೋಗೋಣ ಎಂದು ಅಲ್ಲಿ ಗೆ ಕರೆದುಕೊಂಡು ಹೋದಾಗ ಮನೆಗೆ ಬೀಗ ಹಾಕಲಾಗಿತ್ತು . ಬಳಿಕ ಆರಿಫ್ ಬಾಗಿಲಿನ ಬೀಗ ಮುರಿದು ಸೈನಾಝ್ ಳನ್ನು ಮನೆಯೊಳಗೆ ಕೂಡಿ ಹಾಕಿ ಕುಡಿದ ಮತ್ತಿನಲ್ಲಿ ಏಕಾಏಕಿ ಹಲ್ಲೆ ಮಾಡಿದ್ದಾನೆ.
ಅವಾಚ್ಯ ಶಬ್ದಗಳಿಂದ ಬೈದು ದೇಹದ ವಿವಿಧ ಭಾಗಗಳಿಗೆ ಹಲ್ಲೆ ಮಾಡಿ ಚಪಾತಿ ಮಾಡುವ ಲಟ್ಟಣಿಗೆಯಿಂದ ಕಾಲಿಗೆ ಗಂಭೀರ ಹಲ್ಲೆ ಮಾಡಿದ್ದಾನೆ. ಇದರಿಂದ ಆಕೆಯ ಕಾಲು ಮುರಿದಿದೆ. ಈ ವಿಚಾರ ತಿಳಿದ ಸೈನಾಝ್ ಮನೆಯವರು ಆಕೆಯನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಸಿದ್ದಾರೆ. ‘ನನ್ನ ಗಂಡನಿಗೆ ಗಾಂಜಾ, ಎಮ್.ಡಿ.ಎಮ್ ಸೇವಿಸುವ ಅಭ್ಯಾಸ ಇದ್ದು ಇದರಿಂದ ಈ ರೀತಿ ಹಿಂಸೆ ನೀಡುತ್ತಿದ್ದಾನೆ. ನನಗೆ ನ್ಯಾಯ ಬೇಕು. ಅದಕ್ಕಾ ಗಿ ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ’ ಎಂದು ಹಲ್ಲೆಗೊಳಗಾದ ಸೈನಾಝ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.