Thursday, April 25, 2024
spot_imgspot_img
spot_imgspot_img

ಬೆಳ್ತಂಗಡಿ: ನಿಶ್ಚಿತಾರ್ಥವಾಗಿದ್ದ ಯುವಕನ ಕೊಲೆ ಪ್ರಕರಣ; 6 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ..!

- Advertisement -G L Acharya panikkar
- Advertisement -

ಧರ್ಮಸ್ಥಳ: ಯುವತಿಯೋರ್ವಳನ್ನು ಏಕಮುಖವಾಗಿ ಪ್ರೀತಿಸುತ್ತಿದ್ದ ದರ್ಶನ ಪಾತ್ರಿಯೋರ್ವ ಆಕೆಗೆ ಬೇರೊಂದು ಯುವಕನ ಜೊತೆ ವಿವಾಹ ನಿಶ್ಚಿತಾರ್ಥ ಆಗಿರುವುದನ್ನು ತಿಳಿದು, ತನ್ನ 5 ಮಂದಿ ಸ್ನೇಹಿತರೊಡನೆ ಸೇರಿ ವಿವಾಹವಾಗಲಿರುವ ಅಮಾಯಕ ಯುವಕ ಸುರೇಶ್ ನಾಯ್ಕ ಎಂಬವರನ್ನು ಕುತ್ತಿಗೆಗೆ ನೈಲಾನ್ ಹಗ್ಗದಿಂದ ಬಿಗಿದು ಅಮಾನುಷವಾಗಿ ಕೊಲೆಗೈದ ಹಾಗೂ ಬಳಿಕ ಶವವನ್ನು ಗೋಣಿ ಚೀಲದಲ್ಲಿ ತುಂಬಿ ಧರ್ಮಸ್ಥಳ ಸಮೀಪದ ಪಟ್ರಮೆ ರಸ್ತೆಯಲ್ಲಿ ಪೆಟ್ರೋಲ್ ಸುರಿದು ಸುಟ್ಟು ಹಾಕಿದ ಹೃದಯವಿದ್ರಾವಕ ಘಟನೆ 2017 ನೇ ಎ.30 ರಂದು ನಡೆದಿತ್ತು. ಇದೀಗ ನ್ಯಾಯಾಲಯದಲ್ಲಿ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, 1ನೇ ಜಿಲ್ಲಾ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಆರೋಪಿಗಳ ವಿರುದ್ಧ ದಾಲಿಸಲಾಗಿದ್ದ ಆರೋಪ ಸಾಬೀತುಗೊಂಡಿದೆ ಹಾಗೂ ಇಂದು ಅಪರಾಧಿಗಳಿಗೆ ಶಿಕ್ಷೆಯ ತೀರ್ಪು ಪ್ರಕಟವಾಗಿದೆ.

ಘಟನೆಯ ಪ್ರಮುಖ ಆರೋಪಿಗಳಾದ ಅಳದಂಗಡಿ ನಾವರ ಗ್ರಾಮದ ಧರ್ಮಗುಡಿ ಶ್ರೀ ಆದಿಶಕ್ತಿ ಮಹಾಮ್ಮಾಯಿ ದೇವಸ್ಥಾನದ ಪೂಜಾ ಕೈಂಕರ್ಯ ನೆರವೇರಿಸುತ್ತಿದ್ದ ದರ್ಶನ ಪಾತ್ರಿ ಆನಂದ ನಾಯ್ಕ (35), ಅವರ ಸಂಗಡಿಗರಾದ, ಕೊಲೆ ಕೃತ್ಯದಲ್ಲಿ ನೇರ ಭಾಗಿಯಾಗಿರುವ ಚಾರ್ಮಾಡಿ ಮಾರಿಗುಡಿ ಬಳಿ ನಿವಾಸಿ ವಿನಯ್ (30), ಬೆಳ್ತಂಗಡಿ ಚರ್ಚ್ ರೋಡ್ ನಿವಾಸಿ ಪ್ರವೀಣ್ ನಾಯ್ಕ (35), ಬಂಟ್ವಾಳ ತಾಲೂಕು ಪುದು ಗ್ರಾಮದ ಕೊಡ್ಮಣ್ ಕಾಪಿಕಾಡ್ ನಿವಾಸಿ ಲೋಕೇಶ (34), ಮೂಡುಕೋಡಿ ಗ್ರಾಮದ ಪ್ರಕಾಶ್ (31) ಮತ್ತು ಮೇಲಂತಬೆಟ್ಟು ಗ್ರಾಮದ ಪಕ್ಕಿದಕಲ ನಾಗರಾಜ ಮೂಲ್ಯ (39) ಎಂಬವರಿಗೆ ಐಪಿಸಿ ಸೆಕ್ಷನ್ 302 ರಂತೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ, ಸೆಕ್ಷನ್ 120 ಬಿ’ಯಂತೆ ಜೀವಾವಧಿ ಶಿಕ್ಷೆ ಹಾಗೂ 5 ಸಾವಿರ ರೂಪಾಯಿ ದಂಡ , ಐಪಿಸಿ 201ರಂತೆ 3 ವರ್ಷ ಜೈಲು ಶಿಕ್ಷೆ, 143 ಐಪಿಸಿಯಂತೆ 3 ತಿಂಗಳು ಜೈಲು ಶಿಕ್ಷೆ, 147 ಐಪಿಸಿ ಯಂತೆ 1 ವರ್ಷ ಜೈಲು ಶಿಕ್ಷೆ , 148 ಐಪಿಸಿಯಂತೆ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ ಹಾಗೂ ಕೊಲೆಯಾದ ಸುರೇಶ್ ನಾಯ್ಕ್ ಕುಟುಂಬಕ್ಕೆ 1ಲಕ್ಷ ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ನೀಡಿದೆ.

ಕೊಲೆಯಾದ ಸುರೇಶ್ ನಾಯ್ಕ್

ಪ್ರಕರಣದ ವಿವರ: ಮಲವಂತಿಗೆ ಗ್ರಾಮದ ಮಾಲ್ದಂಗೆ ನಾರಾಯಣ ನಾಯ್ಕ ಮತ್ತು ಗಿರಿಜಾ ದಂಪತಿಗಳದ್ದು ಬಡ ಕುಟುಂಬ ಇವರಿಗೆ ವಸಂತಿ ಹಾಗೂ ಸುರೇಶ ಇಬ್ಬರು ಮಕ್ಕಳು. ನಾರಾಯಣ ನಾಯ್ಕರವರು ನಿಧನವಾಗಿ ವರ್ಷಗಳು ಕಳೆದಿದೆ. ವಸಂತಿರವರ ವಿವಾಹ ಕಳೆದ ಎರಡು ತಿಂಗಳ ಹಿಂದೆಯಷ್ಟೇ ನಡೆದಿದೆ. ಸುರೇಶ್ ನಾಯ್ಕ ಕೂಲಿ ಕೆಲಸ ಮಾಡಿ ಅವರ ಕುಟುಂಬದ ಜೀವನ ಸಾಗುತ್ತಿತ್ತು. ಎ. 30 ರಂದು ಸುರೇಶ್ ನಾಯ್ಕ ಅವರ ವಿವಾಹ ನಿಶ್ಚಿತಾರ್ಥಕ್ಕೆ ಎಲ್ಲಾ ತಯಾರಿ ನಡೆದಿತ್ತು. ನಾವರ ಗ್ರಾಮದ ಯುವತಿಯ ಜೊತೆ ನಡೆಯಬೇಕಿದ್ದ ಈ ಕಾರ್ಯಕ್ರಮ ತಯಾರಿಯ ನಡುವೆ ಆಕೆಯನ್ನು ಏಕಮುಖ ಪ್ರೀತಿಸುತ್ತಿದ್ದ ಆಕೆಯ ಮನೆಯ ಪಕ್ಕದ ನಿವಾಸಿಯೇ ಆಗಿರುವ ಆನಂದ ನಾಯ್ಕ ಎಂಬಾತ ಈ ಮದುವೆಯನ್ನು ತಪ್ಪಿಸುವ ಉದ್ಧೇಶದಿಂದ ಕೊಲೆ ಕೃತ್ಯಕ್ಕೆ ಸಂಚು ರೂಪಿಸಿದ್ದ. ಇದಕ್ಕೆ ಸಹಾಯ ಪಡೆದದ್ದು ಮಿತ್ರ ವಿನಯ್ ಮತ್ತು ತನ್ನದೇ ದರ್ಶನ ಪೂಜೆಯ ಭಕ್ತರಾಗಿದ್ದ ಇತರ ನಾಲ್ಕು ಮಂದಿಯದ್ದು. ಅಮಾಯಕ ಸುರೇಶ್ ನಾಯ್ಕ ಅವರನ್ನು ಎ. 29ರಂದು ಸಂಜೆ ಗಂಗಾ ಕಲ್ಯಾಣ ಯೋಜನೆ ಹಣದ ಮಾಹಿತಿ ನೀಡುವುದಿದೆ ಎಂದು ಕರೆಸಿಕೊಂಡು ಅಪಹರಿಸಿ ಕೊಲೆಗೈದು ಬೆಂಕಿಯಲ್ಲಿ ಉರಿಸಿ ಹಾಕಿದ್ದರು.

ಮೇ 30 ರಂದು ಬೆಳಿಗ್ಗೆ ಪಟ್ರಮೆ ರಸ್ತೆಯಲ್ಲಿ ಮೃತದೇಹವೊಂದು ಅರೆಬೆಂದ ಸ್ಥಿತಿಯಲ್ಲಿದೆ ಎಂಬ ಬಗ್ಗೆ ಧರ್ಮಸ್ಥಳ ಠಾಣೆಗೆ ಬಂದಿದ್ದ ಮಾಹಿತಿಯಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬೆಳ್ತಂಗಡಿ ಠಾಣೆಯಲ್ಲಿ ವ್ಯಕ್ತಿ ನಾಪತ್ತೆ ಪ್ರಕರಣದ ಬೆನ್ನತ್ತಿ ಹೋದ ಪೊಲೀಸರಿಗೆ ಅಲ್ಲಿನ ಮೃತದೇಹದಲ್ಲಿ ಸಿಕ್ಕಿದ್ದು ಸೊಂಟದ ಬೆಲ್ಟ್‌ನ ತುಣುಕು ಮಾತ್ರ. ದೇಹ ಪೂರ್ತಿ ಗುರುತಿಸಲಾರದಷ್ಟು ಬೆಂದು ಹೋಗಿತ್ತು.

ಇಡೀ ಪ್ರಕರಣದಲ್ಲಿ ಪ್ರಮುಖ ಪತ್ತೆಗೆ ಸಹಕಾರಿಯಾದ ವಸ್ತು ಎಂದರೆ ಇದು ಮಾತ್ರ. ಸುರೇಶ್ ಮನೆಯಿಂದ ಹೊರಡುತ್ತಿದ್ದಂತೆ ತಾಯಿಯ ಅಣ್ಣನ ಮಗ 9ನೇ ತರಗತಿ ವಿದ್ಯಾರ್ಥಿ ನಾಗೇಶ್ (ಹೆಸರು ಬದಲಿಸಿದೆ) ಅವರ ಬೆಲ್ಟ್ ಕೇಳಿ ಧರಿಸಿದ್ದರು. ಆ ವಿದ್ಯಾರ್ಥಿ ಬೆಲ್ಟನ್ನು ಗುರುತಿಸಿದ್ದಂತೆ ಭಾವಚಿತ್ರ ಮತ್ತು ಅರೆಬೆಂದ ಮೃತದೇಹದ ಹಣೆಯ ಭಾಗ ಹೋಲಿಕೆಯಾಗುತ್ತಿದ್ದುದರಿಂದ ಇಲ್ಲಿ ಕೊಲೆಯಾಗಿರುವುದು ಇದೇ ನಾಪತ್ತೆಯಾಗಿದ್ದ ಸುರೇಶ್ ಎಂದು 80 ಶೇ. ಖಚಿತ ಪಡಿಸಿಕೊಳ್ಳಲಾಗಿತ್ತು. ಬಳಿಕ ನಡೆಸಿದ ತಾಂತ್ರಿಕ ತನಿಖೆಯ ಭಾಗವಾಗಿ ಸುರೇಶ್ ಅವರ ಮೊಬೈಲ್‌ಗೆ ಬಂದ ಕರೆಯನ್ನು ಆದರಿಸಿ ಮೊದಲಿಗೆ ಪ್ರವೀಣ್ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಅಷ್ಟಕ್ಕೆ ಇಡೀ ಪ್ರಕರಣವೇ ಬೆಳಕಿಗೆ ಬಂದಿದ್ದು, ಬಳಿಕ ಲೋಕೇಶ್, ಆನಂದ ನಾಯ್ಕ, ಪ್ರಕಾಶ್, ವಿನಯ್, ಬಳಿಕ ನಾಗರಾಜ್ ಎಲ್ಲರನ್ನೂ ಕೇವಲ 48 ಗಂಟೆಯೊಳಗೆ ವಶಕ್ಕೆ ಪಡೆದುಕೊಳ್ಳಲಾಗಿತ್ತು.

ತ್ವರಿತ ಕಾರ್ಯಾಚರಣೆ: ಬಂಟ್ವಾಳ ಡಿವೈಎಸ್‌ಪಿ ರವೀಶ್ ಸಿ.ಆರ್. ಅವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದ ವಿಶೇಷ ತನಿಖಾ ತಂಡದಲ್ಲಿ ಧರ್ಮಸ್ಥಳ ಠಾಣೆಯ ಎಸ್.ಐ. ರಾಮ ನಾಯ್ಕ ಮತ್ತು ಕೊರಗಪ್ಪ ನಾಯ್ಕ, ಸಿಬ್ಬಂದಿ ಪ್ರವೀಣ್ ಎಂ. ಬೆನ್ನಿಚ್ಚನ್, ವೆಂಕಟೇಶ್ ನಾಯ್ಕ್, ವಿಜು, ಸ್ಯಾಮುವೆಲ್, ಪೌಲೋಸ್, ಪ್ರಮೋದ್, ಮಹಿಳಾ ಸಿಬ್ಬಂದಿ ಸವಿತಾ, ಕಂಪ್ಯೂಟರ್ ವಿಭಾಗದ ದಿವಾಕರ ಮತ್ತು ತಾರಾನಾಥ ಅವರು ಅಂದಿನ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

- Advertisement -

Related news

error: Content is protected !!