ಬೆಳ್ತಂಗಡಿ : ವ್ಯಕ್ತಿಯೊಬ್ಬ ತನ್ನ ತಾಯಿ ಮತ್ತು ಸಹೋದರರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಕೊಂಕೋಡಿಯಲ್ಲಿ ನಡೆದಿದೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಹಲ್ಲೆ ನಡೆಸಿದ ವ್ಯಕ್ತಿಯನ್ನು ಕುವೆಟ್ಟುವಿನ ಕೊಂಕೋಡಿಯ ನಿವಾಸಿ ಸಿರಿಲ್ ಪಿಂಟೋ ಎಂದು ಗುರುತಿಸಲಾಗಿದೆ. ಡಿ.14ರಂದು ರಾತ್ರಿ ಅಮಲು ಪದಾರ್ಥ ಸೇವಿಸಿ ತನ್ನ ಸಹೋದರನಿಗೆ ಮರದ ದೊಣ್ಣೆಯಿಂದ ಥಳಿಸಿ ತಲೆ ಹಾಗೂ ಕೈಗಳಿಗೆ ಗಂಭೀರ ಹಲ್ಲೆ ನಡೆಸಿದ್ದಾನೆ. ಗಾಯಗೊಂಡ ಅವರು ಗುರುವಾಯನಕೆರೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.
ಡಿಸೆಂಬರ್ 15 ರಂದು, ಆರೋಪಿ ಸಿರಿಲ್ ಅವರ ತಾಯಿ ಫೆಲ್ಸಿ ಮೋನಿಸ್ ಮತ್ತು ಗಾಯಗೊಂಡು ಮಲಗಿದ್ದ ಸಹೋದರ ಹೆನ್ರಿ ಪಿಂಟೊ ಅವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರನ್ನೂ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ. ಈ ಕುರಿತು ಆರೋಪಿಯ ಮತ್ತೋರ್ವ ಸಹೋದರ ಜಾನ್ ಪಿಂಟೋ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.