ಬೆಳ್ತಂಗಡಿ: ಸೇತುವೆಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ಕಾರ್ಕಳ ತಾಲೂಕಿನ ನಿಟ್ಟೆ ನಿವಾಸಿಯಾದ ಸಂತೋಷ್ ಮತ್ತು ಗೀತಾ ದಂಪತಿಗಳ ಒಂದು ವರ್ಷ ಪ್ರಾಯದ ಮಗು ಅತರ್ವ ಸಾವನ್ನಪ್ಪಿದ್ದ ಘಟನೆ ಬೆಳ್ತಂಗಡಿ ತಾಲೂಕಿನ ಮಾಲಾಡಿಯಲ್ಲಿ ನಡೆದಿದೆ.
ಮಗುವಿನ ತಾಯಿ ಗೀತಾರವರು ಬೆಳ್ತಂಗಡಿ ತಾಲೂಕಿನ ಪಡಂಗಡಿಯಲ್ಲಿರುವ ತನ್ನ ತವರು ಮನೆಗೆ ಬಂದಿದ್ದು, ಅಲ್ಲಿಂದ ಜ.30 ರಂದು ತಂಗಿ ಮನೆಯಾದ ಶಂಬೂರು ಬರ್ಕೆ ಹೋಗಿ ವಾಪಸ್ ತವರು ಮನೆಗೆ ಮಗು ಅತರ್ವ ಮತ್ತು ತಾಯಿ ರತ್ನಾ ಜೊತೆ ಶಂಬೂರಿನ ದಯಾನಂದ ಎಂಬವರ ಆಟೋ ರಿಕ್ಷಾದಲ್ಲಿ ಬರುತ್ತಿದ್ದಾಗ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಮಗು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದು, ತಕ್ಷಣ ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ವರದಿಯಾಗಿದೆ. ರಿಕ್ಷಾದಲ್ಲಿದ್ದ ಉಳಿದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಇನ್ನು ಈ ದುರ್ಘಟನೆಗೆ ರಿಕ್ಷಾ ಚಾಲಕನ ನಿರ್ಲಕ್ಷ್ಯತನವೇ ಕಾರಣ ಎನ್ನಲಾಗಿದ್ದು, ಈ ಬಗ್ಗೆ ಆಟೋ ಚಾಲಕ ದಯಾನಂದ ವಿರುದ್ಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.