ಬೆಂಗಳೂರು: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಎದುರಿಸಿದ ಮಹಾದೇಪುರದ ಬಳಿ ಬಿಬಿಎಂಪಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದೆ.
ಈ ಹಿಂದೆ ಕೂಡ ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿದಂತೆ ಭಾರಿ ಗಲಾಟೆ ನಡೆದಿದ್ದರೂ, ಒತ್ತುವರಿ ತೆರವುಗೊಳಿಸುವಂತೆ ಖುದ್ದು ನ್ಯಾಯಾಲಯವೇ ಸೂಚಿಸಿದ್ದರೂ ಆ ಬಗ್ಗೆ ಸರ್ಕಾರಗಳು ಕಠಿಣ ಕ್ರಮ ತೆಗೆದುಕೊಂಡಿರಲಿಲ್ಲ. ಆದರೆ ಈ ಬಾರಿ ಮಾತ್ರ ಸರ್ಕಾರ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಇದಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ರಾಜಕಾಲುವೆ ಒತ್ತುವರಿ ಕಟ್ಟಡಗಳ ತೆರವಿನ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ.
ಚಿನ್ನಪ್ಪಹಳ್ಳಿಯಿಂದ ಮುನೇನಕೊಳಲು, ಸ್ಪೈಸ್ ಗಾರ್ಡನ್ ಮೂಲಕ ವರ್ತೂರ್ ಕೆರೆಗೆ ಹೋಗುವ ರಾಜಕಾಲುವೆ, ಚಿನ್ನಪ್ಪಹಳ್ಳಿಯಿಂದ ಮುನೇನಕೊಳಲು, ಸ್ಪೈಸ್ ಗಾರ್ಡನ್ ಬಳಿ ಹಾದು ಹೋಗುವ ರಾಜಕಾಲುವೆಯನ್ನ ಒತ್ತುವರಿ ತೆರವು ಕಾರ್ಯಾಚರಣೆ ಸೋಮವಾರ ನಡೆಯಿತು.
ಸೋಮವಾರ ಮಾಧ್ಯಮಗಳಿಗೆ ತೆರವು ಕಾರ್ಯಾಚರಣೆ ವಿವರ ನೀಡಿದ ಬಿಬಿಎಂಪಿ ಮುಖ್ಯ ಇಂಜಿನಿಯರ್ ಬಸವರಾಜ್ ಕಬಾಡೆ, ಚಿನ್ನಪ್ಪನಹಳ್ಳಿ ಕೆರೆಯಿಂದ ಮುನೇನಕೊಳಲು ತನಕ ತೆರವು ಕಾರ್ಯಚರಣೆ ನಡೆಯುತ್ತಿದೆ. ಮಾರ್ಕಿಂಗ್ ಮಾಡಿ ತೆರವು ಕಾರ್ಯಚರಣೆ ಶುರುವಾಗಿದೆ ಎಂದರು.
ಸ್ಪೈಸ್ ಗಾರ್ಡನ್ ಬಳಿ 20 ಬಿಲ್ಡಿಂಗ್ ಗಳು ಒತ್ತುವರಿ ಮಾಡಿಕೊಳ್ಳಲಾಗಿವೆ. ಚಿನ್ನಪ್ಪನಹಳ್ಳಿಯಲ್ಲಿ 5 ಬಿಲ್ಡಿಂಗ್ ಗಳು ಒತ್ತುವರಿಯಾಗಿದ್ದು, ಚಿನ್ನಪ್ಪನಹಳ್ಳಿಯಲ್ಲಿ 2ರಿಂದ 5 ಮೀಟರ್ ಒತ್ತುವರಿಯಾಗಿದೆ. ಒತ್ತುವರಿಯಾದ ಜಾಗದಲ್ಲಿ ಬೃಹತ್ ನೀರುಗಾಲುವೆ ಕಾಂಪೌಂಡ್ ನಿರ್ಮಿಸಲಾಗುವುದು ಎಂದು ಅವರು ವಿವರ ನೀಡಿದರು.
ಒತ್ತುವರಿಯಾದ ಜಾಗ ಖಾಲಿ ಮಾಡಲು ಕಂದಾಯ ಇಲಾಖೆ ನೋಟಿಸ್ ನೀಡಿದೆ. ನೋಟಿಸ್ ಕೊಟ್ಟ 7 ದಿನಕ್ಕೆ ತೆರವು ಕಾರ್ಯಚರಣೆ ಮತ್ತೆ ಶುರುವಾಗುತ್ತೆ. ಆದ್ದರಿಂದ ಒತ್ತುವರಿದಾರರು ಕೂಡಲೇ ಜಾಗ ತೆರವು ಮಾಡಬೇಕು ಎಂದು ಅವರು ಸಲಹೆ ನೀಡಿದರು.