ಬೆಳ್ಳಾರೆ: ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳ ತಂಡ ಇದೀಗ ಬೆಳ್ಳಾರೆ ಸಹಿತ ವಿವಿಧೆಡೆ ಸೈಬರ್ ಕೇಂದ್ರಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ತಲೆ ಮರೆಸಿಕೊಂಡಿರುವ ಈ ನಾಲ್ವರು ಪಾಸ್ಪೋರ್ಟ್ ಮಾಡಿಕೊಂಡಿರಬಹುದಾದ ಶಂಕೆಯ ಮೇಲೆ ಹಲವು ಸೈಬರ್ ಕೇಂದ್ರಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಳ್ಳಾರೆ ಮತ್ತು ಆಸುಪಾಸಿನ ಸೈಬರ್ ಕೇಂದ್ರಗಳ ಮಾಲಕರ ಮೊಬೈಲ್ ಫೋನ್, ಕಂಪ್ಯೂಟರ್ ಸಹಿತ ಇನ್ನಿತರ ದಾಖಲೆ ಪರಿಶೀಲಿಸುತ್ತಿರುವ ಎನ್ಐಎ ತಂಡ ಇತರ ದಾಖಲೆ ಸಂಗ್ರಹದಲ್ಲಿಯೂ ತೊಡಗಿಸಿಕೊಂಡಿದೆ.
ಪ್ರವೀಣ್ ಹತ್ಯೆ ಘಟನೆಗೆ ಸಂಬಂಧಿಸಿ ದಕ್ಷಿಣ ಕನ್ನಡ, ಹುಬ್ಬಳ್ಳಿ ಮತ್ತು ಮೈಸೂರು ಸೇರಿದಂತೆ ರಾಜ್ಯದ 5 ಸ್ಥಳಗಳಲ್ಲಿ ನ.5ರಂದು ಶೋಧ ನಡೆಸಿದ್ದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪ್ರಮುಖರು ಸೇರಿದಂತೆ ಒಟ್ಟು ಹದಿಮೂರು ಜನರನ್ನು ಬಂಧಿಸಿದ್ದಾರೆ.
ಪ್ರವೀಣ್ ಹತ್ಯೆ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಜೂ.27ರಂದು ಪ್ರಕರಣ ದಾಖಲಾಗಿತ್ತು. ಬಳಿಕ ಈ ಪ್ರಕರಣ ಎನ್ಐಎಗೆ ಹಸ್ತಾಂತರಗೊಂಡಿದ್ದು ಆ.4ರಂದು ಎನ್ಐಎ ಅಧಿಕಾರಿಗಳು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ಬೆಂಗಳೂರು ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ತನಿಖೆ ಚುರುಕುಗೊಳಿಸಿದ್ದರು.