Wednesday, July 9, 2025
spot_imgspot_img
spot_imgspot_img

ಭಾರತದ ಪವಿತ್ರ ದೇಗುಲಗಳ ಜೀರ್ಣೋದ್ಧಾರದಲ್ಲಿ ಪ್ರಧಾನಿ ಮೋದಿಯವರದ್ದು ಪ್ರಮುಖ ಪಾತ್ರ; ಸಂಸ್ಕೃತಿ ರಕ್ಷಣೆಗೆ ಆದ್ಯತೆ

- Advertisement -
- Advertisement -
vtv vitla
vtv vitla

ವಾರಾಣಸಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಡಿ.13ರಂದು ಉತ್ತರಪ್ರದೇಶದ ವಾರಾಣಸಿಗೆ ಭೇಟಿ ನೀಡಲಿದ್ದು, ಕಾಶಿ ವಿಶ್ವನಾಥ ಕಾರಿಡಾರ್​ ಉದ್ಘಾಟನೆ ಮಾಡಲಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭೇಟಿ ಹಿನ್ನೆಲೆಯಲ್ಲಿ ಅಲ್ಲಿ ಬಿಜೆಪಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್​ ಚುಗ್​ ಮತ್ತು ಕೇಂದ್ರ ಸಾಂಸ್ಕೃತಿಕ ಸಚಿವ ಜಿ.ಕಿಶನ್​ ರೆಡ್ಡಿ ಇತ್ತೀಚೆಗಷ್ಟೇ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಕಾಶಿ ಒಂದು ಮೋಕ್ಷದಾಯಿನಿ ನಗರವೆಂದು ನಾವು ಬಾಲ್ಯದಿಂದಲೂ ಕೇಳುತ್ತಿದ್ದೇವೆ. ಇದೀಗ ಇಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಯೋಜನೆ ಉದ್ಘಾಟನೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

ಸಂಸ್ಕೃತಿಗಳ ಪುನರುಜ್ಜೀವನದಲ್ಲಿ ಮೋದಿಯವರ ಪಾತ್ರ
ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಬಡಜನರ, ದೇಶದ ಆರ್ಥಿಕ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸುವುದರ ಜತೆಗೆ, ಈ ದೇಶದ ಸಂಸ್ಕೃತಿ, ಸಂಪ್ರದಾಯ, ಧಾರ್ಮಿಕತೆಯ ರಕ್ಷಣೆಗಾಗಿಯೂ ಅಷ್ಟೇ ಯೋಜನೆಗಳನ್ನು ಜಾರಿ ಮಾಡುತ್ತಿದ್ದಾರೆ. ಮೋದಿ ಪ್ರಧಾನಿಯಾದ ಮೇಲೆ ಎಂದಲ್ಲ, ಅವರು ಗುಜರಾತ್​ ಮುಖ್ಯಮಂತ್ರಿಯಾದಾಗಿನಿಂದಲೂ ಕೂಡ ಇದನ್ನು ಮಾಡುತ್ತಿದ್ದಾರೆ. ಈಗ ಪ್ರಧಾನಿ ನರೇಂದ್ರ ಮೋದಿ ಸಾಂವಿಧಾನಿಕವಾಗಿ ಪ್ರಮುಖ ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಶುರುಮಾಡಿ 20ವರ್ಷಗಳಾದವು. ಕಳೆದ ಸಾವಿರ ವರ್ಷಗಳಿಂದಲೂ ಭಾರತದಲ್ಲಿ ಇದ್ದ ಆಕ್ರಮಣಕಾರರ ಹಲವು ನಿಯಮಗಳನ್ನು ತೊಡೆದುಹಾಕುವಲ್ಲಿ ಅವರು ತುಂಬ ಪ್ರಮುಖ ಪಾತ್ರ ವಹಿಸಿದ್ದಾರೆ. ಅದರಲ್ಲೂ ಸಹಸ್ರ ವರ್ಷಗಳಿಂದ ಆಕ್ರಮಣಕಾರರ ವಿರುದ್ಧದ ಹೋರಾಟದಲ್ಲಿ ಇಲ್ಲಿನ ಪವಿತ್ರ ದೇವಸ್ಥಾನಗಳು ನಿರ್ವಹಿಸಿದ ಪಾತ್ರ, ಧಾರ್ವಿುಕ ಪುನರುತ್ಥಾನ ಮತ್ತು ಪುನರುಜ್ಜೀವನದ ಪ್ರಯತ್ನಗಳನ್ನು ಅರಿತಿರುವ ಪ್ರಧಾನಿ ಮೋದಿ, ಅಂಥ ಆಕ್ರಮಣಕಾರರ ದಾಳಿಗೆ ನಲುಗಿದ ಹಿಂದೂ ದೇವಾಲಯಗಳ ಅಭಿವೃದ್ಧಿ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ.

vtv vitla

ನರೇಂದ್ರ ಮೋದಿಯವರು ಕಳೆದ 20ವರ್ಷಗಳಲ್ಲಿ ದೇಶಾದ್ಯಂತ ಹಲವು ಹಿಂದು ದೇವಸ್ಥಾನಗಳ ಪುನರುತ್ಥಾನ ಮಾಡಿ, ಅದಕ್ಕೆ ಕಾಯಕಲ್ಪ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅದರಲ್ಲೂ 2014ರ ಮೇ ತಿಂಗಳಲ್ಲಿ ಪ್ರಧಾನಿ ಸ್ಥಾನಕ್ಕೆ ಏರಿದ ಮೇಲೆ ಈ ಕಾರ್ಯವ್ಯಾಪ್ತಿಯನ್ನೂ ಅವರು ವಿಸ್ತರಿಸಿದ್ದಾರೆ. ಹೀಗೆ ಮೋದಿಯವರು ಪ್ರಧಾನಿಯಾದ ಮೇಲೆ ನಿರ್ಮಾಣ ಮತ್ತು ಜೀರ್ಣೋದ್ಧಾರ ಮಾಡಿದ ವಿವಿಧ ದೇವಾಲಯಗಳ ಪಟ್ಟಿ ಇಲ್ಲಿದೆ.

ಅಯೋಧ್ಯೆ ರಾಮಮಂದಿರ
ಇದು ಪ್ರಮುಖವಾಗಿ ಗಮನಸೆಳೆಯುವ ಒಂದು ಯೋಜನೆ. ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸವಾದ ಬಳಿಕ ಅದೊಂದು ವಿವಾದಿತ ಪ್ರದೇಶವಾಗಿಯೇ ಉಳಿದಿತ್ತು. ಅಲ್ಲಿ ರಾಮಮಂದಿರ ನಿರ್ಮಾಣವಾಗಬೇಕೋ, ಮಸೀದಿ ನಿರ್ಮಾಣ ಆಗಬೇಕೋ ಎಂಬುದು ದೊಡ್ಡ ಪ್ರಶ್ನೆ. ಕೋಮು ಸೌಹಾರ್ದತೆ ಮೇಲೆ ಪರಿಣಾಮ ಬೀರುವ ವಿಚಾರವಾಗಿದ್ದರಿಂದ ಅತ್ಯಂತ ಸೂಕ್ಷ್ಮ ವಿಷಯ ಎನ್ನಿಸಿಕೊಂಡಿತ್ತು. ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. 2019ರ ನವೆಂಬರ್​ನಲ್ಲಿ ಸುಪ್ರೀಂಕೋರ್ಟ್​ನಿಂದ ಹಿಂದುಗಳ ಪರವಾಗಿ ತೀರ್ಪು ಬಂದಿತ್ತು.ಹೀಗೆ ಅಲ್ಲಿ ಶ್ರೀರಾಮಮಂದಿರ ನಿರ್ಮಾಣದ ಪರವಾಗಿ ತೀರ್ಪು ಬರುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಐದುಶತಮಾನಗಳಷ್ಟು ಹಳೆಯದಾದ ಕನಸೊಂದು ನನಸಾಗುವಂತಾಯ್ತು..2020ರ ಆಗಸ್ಟ್​ 5ರಂದು ಸ್ವತಃ ಪ್ರಧಾನಿ ಮೋದಿಯವರೇ ಮಂದಿರಕ್ಕೆ ಅಡಿಗಲ್ಲು ಸ್ಥಾಪನೆ ನೆರವೇರಿಸಿ, ಭೂಮಿ ಪೂಜೆ ಮಾಡಿದ್ದಾರೆ. ಹೀಗೆ ಭೂಮಿಪೂಜೆ ನಡೆದ ಬಳಿಕವೂ ಕೂಡ ಕೇಂದ್ರಸರ್ಕಾರದ ಪ್ರೋತ್ಸಾಹ, ಸಹಕಾರ, ಮೋದಿಯವರ ಮಾರ್ಗದರ್ಶನದಲ್ಲಿ ಉತ್ತರಪ್ರದೇಶ ಬಿಜೆಪಿ ಸರ್ಕಾರ ವೇಗವಾಗಿ ಕಾಮಗಾರಿ ನಡೆಸುತ್ತಿದೆ. ಅಷ್ಟೇ ಅಲ್ಲ, ಅಯೋಧ್ಯೆಯನ್ನು ಹಿಂದೂ ಯಾತ್ರಾರ್ಥಿಗಳ ಪವಿತ್ರ ಸ್ಥಳವಾಗಿ ಪರಿವರ್ತಿಸುವ ಕೆಲಸ ಭರದಿಂದ ಸಾಗುತ್ತಿದೆ.

vtv vitla
vtv vitla

ಕಾಶಿ ವಿಶ್ವನಾಥ ಕಾರಿಡಾರ್​
ಕಾಶಿ ವಿಶ್ವನಾಥ ದೇವಸ್ಥಾನ ಹಿಂದುಗಳ ಅತ್ಯಂತ ಪವಿತ್ರ ದೇಗುಲಗಳಲ್ಲಿ ಒಂದು. ಕಾಶಿ ಎಂದರೇ ಅದೊಂದು ಮುಕ್ತಿ ನೀಡುವ ಪವಿತ್ರ ಸ್ಥಳ ಎಂಬ ಪರಿಕಲ್ಪನೆ ಪುರಾತನ ಕಾಲದಿಂದಲೂ ಇದೆ. ಭೂಮಿಯ ಮೇಲಿನ ಅತ್ಯಂತ ಹಳೇ ನಗರವಾದ ಕಾಶಿ ಧಾರ್ಮಿಕವಾಗಿ ಎಷ್ಟು ಮಹತ್ವ ಪಡೆದಿದೆಯೋ, ಅಷ್ಟೇ ಅಲ್ಲಿನ ಕೊಳಕು, ಅನೈರ್ಮಲ್ಯಕ್ಕೂ ಹೆಸರುವಾಸಿಯಾಗಿತ್ತು. ಯಾತ್ರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವುದರಿಂದ ಸಹಜವಾಗಿಯೇ ಗಲೀಜು ಕೂಡ ಅಷ್ಟೇ ಪ್ರಮಾಣದಲ್ಲಿ ಆಗುತ್ತಿತ್ತು. ಕಾಶಿಯ ಸ್ವಚ್ಛತೆ ಬಗ್ಗೆ ಮೊದಲು ಧ್ವನಿ ಎತ್ತಿದವರು ಮಹಾತ್ಮ ಗಾಂಧೀಜಿ. 1916ರ ಫೆಬ್ರವರಿ 4ರಂದು ಇಲ್ಲಿಗೆ ಬನಾರಸ್​ ಹಿಂದು ವಿಶ್ವವಿದ್ಯಾಲಯದ ಉದ್ಘಾಟನೆಗೆ ಆಗಮಿಸಿದ್ದ ಗಾಂಧೀಜಿ, ಕಾಶಿ ಸ್ವಚ್ಛತೆ ಬಗ್ಗೆ ಮಾತನಾಡಿದರು. ಅದಾದ ಬಳಿಕ ನರೇಂದ್ರ ಮೋದಿ ಪ್ರಧಾನಮಂತ್ರಿಯಾದ ಮೇಲೆ ಕಾಶಿಯ ಬಗ್ಗೆ, ಅಲ್ಲಿನ ಮೂಲಸೌಕರ್ಯ, ಸ್ವಚ್ಛತೆ ಬಗ್ಗೆ ವಿಶೇಷ ಗಮನಹರಿಸಿದರು.

ಪ್ರಧಾನಿ ಮೋದಿಯವರು 2019ರ ಮಾರ್ಚ್​ 8ರಂದು, ಅವರ ಕನಸಿನ, ಮಹತ್ವಾಕಾಂಕ್ಷಿ ಯೋಜನೆ ಕಾಶಿ-ವಿಶ್ವನಾಥ ಕಾರಿಡಾರ್​ಗೆ ಚಾಲನೆ ನೀಡಿದರು. ಇದು ಕಾಶಿ ವಿಶ್ವನಾಥ ಮಂದಿರ ಸಂಕೀರ್ಣದ ಜೀರ್ಣೋದ್ಧಾರ ಮತ್ತು ಪುನರುತ್ಥಾನಕ್ಕೆ ಸಂಬಂಧಪಟ್ಟ ವಿಶೇಷ ಯೋಜನೆಯಾಗಿದೆ. ಕಾಶಿಯ ದೇವಸ್ಥಾನದ ಆವರಣವನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ಕಾಶಿಯ ಕಳೆದುಹೋದ ಭವ್ಯತೆಯನ್ನು ಮರುಸ್ಥಾಪಿಸುವ ಮಹದುದ್ದೇಶವನ್ನು ಇದು ಹೊಂದಿದೆ. ಅಷ್ಟೇ ಅಲ್ಲ, ಕಾಶಿಯಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಪಾರಂಪರಿಕ ರಚನೆಗಳ ಸಂರಕ್ಷಣೆ, ಹೊಸ ಸೌಕರ್ಯಗಳ ಸೃಷ್ಟಿ, ದೇಗುಲದ ಸುತ್ತ ಜನಸಂಚಾರ ಮತ್ತು ವಾಹನ ಸಂಚಾರ ಸುಗಮಗೊಳಿಸುವುದು, ಗಂಗಾನದಿಯಿಂದ ನೀರು ತಂದು ದೇಗುಲಗಳಲ್ಲಿ ಗಂಗಾಜಲ ಅರ್ಪಿಸಲು ಸರಳ ವ್ಯವಸ್ಥೆ ಮಾಡುವುದು ಈ ಯೋಜನೆಯ ಗುರಿಯಾಗಿತ್ತು. ಅಂದಹಾಗೆ ಯೋಜನೆ ಸಾಕಾರಕ್ಕೆ ಅಗತ್ಯವಿರುವ ಸ್ಥಳ ಖರೀದಿ ಕಾರ್ಯ ಕೂಡ ಪ್ರಧಾನಿ ಮೋದಿ ಮಾರ್ಗದರ್ಶನದಲ್ಲೇ ನಡೆದಿದೆ. ಡಿ.13ರಂದು ಉದ್ಘಾಟನೆಗೆ ಸಿದ್ಧವಾಗಿರುವ ಕಾಶಿ ವಿಶ್ವನಾಥ ಕಾರಿಡಾರ್​ ಕಾಮಗಾರಿಯ ಪ್ರತಿಹಂತದಲ್ಲೂ ಕೂಡ ನರೇಂದ್ರ ಮೋದಿಯವರು ಹೆಚ್ಚಿನ ಆಸ್ಥೆವಹಿಸಿ, ಮೇಲ್ವಿಚಾರಣೆ ಮಾಡಿದ್ದಾರೆ. 2017ರಲ್ಲಿ ಇದ್ದಾಗಿನ ಕಾಶಿಗೂ, ಈಗಿನ ಅಭಿವೃದ್ಧಿಹೊಂದಿದ ಕಾಶಿಗೂ ನಡುವೆ ಇರುವ ವ್ಯತ್ಯಾಸವನ್ನು ಯಾರಾದರೂ ಗುರುತಿಸಬಹುದಾಗಿದೆ. ಅದೂ ಕೂಡ ಕೇವಲ 4 ವರ್ಷಗಳಲ್ಲಿ ಸಾಧಿಸಿದ ಅಭಿವೃದ್ಧಿ ಎಂಬುದು ಹೆಮ್ಮೆಯ ವಿಚಾರವೇ ಆಗಿದೆ.

vtv vitla
vtv vitla

ಸೋಮನಾಥ ದೇಗುಲ ಸಂಕೀರ್ಣ ಅಭಿವೃದ್ಧಿ
ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗುವುದಕ್ಕೂ ಮೊದಲು ಗುಜರಾತ್​ ಮುಖ್ಯಮಂತ್ರಿಯಾಗಿದ್ದರು. ಆಗ ಸಹ ದೇಗುಲಗಳ ಅಭಿವೃದ್ಧಿ, ಜೀರ್ಣೋದ್ಧಾರಕ್ಕೆ ಮಹತ್ವ ಕೊಟ್ಟಿದ್ದಾರೆ. ಹಲವು ಯೋಜನೆಗಳನ್ನು ಪ್ರಾರಂಭಿಸಿದ್ದರು. ಅದರಲ್ಲೂ ಗುಜರಾತ್​ನ ಸೋಮನಾಥ ದೇಗುಲದ ಅಭಿವೃದ್ಧಿಗೆ ಶ್ರಮಿಸಿದ್ದರು. ಇತ್ತೀಚೆಗಷ್ಟೇ ಅಲ್ಲಿ, ಒಂದು ಕಡಲತೀರ ವಾಯುವಿಹಾರ ಸ್ಥಳ ಮತ್ತು ವಸ್ತುಪ್ರದರ್ಶನಾ ಕೇಂದ್ರವನ್ನು ಉದ್ಘಾಟಿಸಿದ್ದಾರೆ. ಈ ಸೋಮನಾಥ ದೇಗುಲದ ಟ್ರಸ್ಟ್​ಗೆ ಪ್ರಧಾನಿ ಮೋದಿಯವರೇ ಅಧ್ಯಕ್ಷರಾಗಿದ್ದು, ದೇವಾಲಯದ ಸರ್ವ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.

2013ರ ಭಾರಿ ಪ್ರಮಾಣದ ಪ್ರವಾಹದಿಂದ ಶಿಥಿಲಗೊಂಡಿದ್ದ ಕೇದಾರನಾಥ ಧಾಮದ ಮರು ಅಭಿವೃದ್ಧಿ ಕಾರ್ಯ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೈಗೆತ್ತಿಕೊಂಡಿತು. ಈಗಂತೂ ದೇಗುಲದ ಸಂಕೀರ್ಣವನ್ನು ಪೂರ್ತಿಯಾಗಿ ಪುನರುತ್ಥಾನ ಮಾಡಲಾಗಿದೆ. ಹಾಗೇ, ಸಂಪೂರ್ಣವಾಗಿ ಬದಲಿಸಲಾಗಿದೆ. ಇಡೀ ದೇವಾಲಯದ ವೈಭವನ್ನು ಪುನಃಸ್ಥಾಪಿಸಲು ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ತನಗೆ ಪ್ರಿಯವಾಗಿದ್ದ ಕೇದಾರನಾಥ ದೇವಾಲಯ 2013ರಲ್ಲಿ ಹೇಗೆ ನಾಶವಾಯಿತು, ಅದರ ಮರುಸ್ಥಾಪನೆಗೆ ಸಂಬಂಧಪಟ್ಟಂತೆ 2017ರಲ್ಲಿ ಅಲ್ಲಿನ ಜನರಿಗೆ ಭರವಸೆ ಕೊಟ್ಟ ನಂತರ ಏನೆಲ್ಲ ಕ್ರಮ ಕೈಗೊಳ್ಳಲಾಯಿತು ಎಂಬುದನ್ನು ಪ್ರಧಾನಿ ಮೋದಿಯವರು ಸ್ವತಃ ತಿಳಿಸಿದ್ದಾರೆ.

ಕಾಶ್ಮೀರದಲ್ಲಿ ದೇಗುಲ ಜೀರ್ಣೋದ್ಧಾರ
ಜಮ್ಮು-ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಅದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ರೂಪಿಸಲಾಗಿದೆ. ಅದರೊಂದಿಗೇ, ಕೇಂದ್ರ ಸರ್ಕಾರ ಕಾಶ್ಮೀರ ಮತ್ತು ಶ್ರೀನಗರದಲ್ಲಿ ಇದ್ದ ಹಲವು ಧಾರ್ಮಿಕ ಪ್ರದೇಶಗಳ ಅಭಿವೃದ್ಧಿ, ಜೀರ್ಣೋದ್ಧಾರ ಕೆಲಸವನ್ನೂ ಪ್ರಾರಂಭಿಸಿದೆ. ಒಂದು ಅಂದಾಜಿನ ಪ್ರಕಾರ ಕಾಶ್ಮೀರದಲ್ಲಿ ದೇಗುಲಗಳು, ಪವಿತ್ರ ಸ್ಥಳಗಳು, ಗುಹೆಗಳು, ಪೂಜನೀಯ ಮರಗಳು ಸೇರಿ ಒಟ್ಟು 1842 ಹಿಂದು ಧಾರ್ಮಿಕ ಸ್ಥಳಗಳು ಇವೆ. ಇದರಲ್ಲಿ 952 ದೇವಸ್ಥಾನಗಳು. 212 ಸುವ್ಯವಸ್ಥೆಯಲ್ಲಿದ್ದರೆ, ಉಳಿದ 740 ಶಿಥಿಲ ಸ್ಥಿತಿಯಲ್ಲಿವೆ. ಇದೀಗ ಕೇಂದ್ರ ಸರ್ಕಾರ ಇಲ್ಲಿನ ದೇಗುಲಗಳ ಜೀರ್ಣೋದ್ಧಾರಕ್ಕೆ ಮುಂದಾಗಿದೆ.

ಅಧ್ಯಾತ್ಮಿಕ ಅರಿವು ಮೂಡಿಸುವ ಪ್ರಧಾನಿ ಮೋದಿ
ಪ್ರಧಾನಿ ಮೋದಿಯವರು ತಮ್ಮ ಧಾರ್ಮಿಕ, ಆಧ್ಯಾತ್ಮಿಕ ನಂಬಿಕೆಗಳ ಬಗ್ಗೆ ಸಾರ್ವಜನಿಕವಾಗಿ ಮುಕ್ತವಾಗಿ ಮಾತನಾಡುತ್ತಾರೆ. ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುವಂತೆ ಜನರಿಗೆ ಕರೆ ನೀಡುತ್ತಾರೆ. ಅಲ್ಲದೆ, ಭಾರತ ಮೊದಲಿನಿಂದಲೂ ಇಲ್ಲಿನ ಆಧ್ಯಾತ್ಮಿಕ ಶಕ್ತಿಗೇ ಹೆಸರುವಾಸಿಯಾಗಿದೆ. ಈಗ ಇಲ್ಲಿನ ಧಾರ್ಮಿಕ, ದೈವಿಕ ಸ್ಥಳಗಳು ಮೂಲೆಗುಂಪಾಗುತ್ತಿವೆ. ಆದರೆ ಈ ಧಾರ್ಮಿಕ, ದೈವಿಕ ಪ್ರದೇಶಗಳನ್ನು ಮತ್ತೆ ಪುನರುಜ್ಜೀವನಗೊಳಿಸಿ, ಹಳೆಯ ವೈಭವಕ್ಕೆ ಮರಳಿಸಿದಾಗಲೇ ಭಾರತದಲ್ಲಿ ಆಧ್ಯಾತ್ಮಿಕ ಜಾಗೃತಿ ಬರಲು ಸಾಧ್ಯ ಎಂಬುದನ್ನು ಪದೇಪದೆ ಹೇಳುತ್ತಿದ್ದಾರೆ ಮತ್ತು ಅದಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಿ, ಕಾರ್ಯರೂಪಕ್ಕೆ ತರುತ್ತಿದ್ದಾರೆ.

vtv vitla
vtv vitla
vtv vitla
- Advertisement -

Related news

error: Content is protected !!