ಮುಲ್ಕಿ: ಮುಲ್ಕಿ ಸಮೀಪದ ಕೆಎಸ್ ರಾವ್ ನಗರ ನಿವಾಸಿ ಎರಡು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಲು ಮನೆಗೆ ಹೋದಾಗ ಮನೆಯವರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ, ನೂಕಾಟ, ತಳ್ಳಾಟ ನಡೆದಿದೆ ಎನ್ನಲಾಗಿದ್ದು, ಘಟನೆಯಿಂದ ಆರೋಪಿ, ಪೊಲೀಸರು ಹಾಗೂ ಮನೆಯವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮುಲ್ಕಿ ಪೊಲೀಸರಿಗೆ ಎರಡು ಪ್ರಕರಣದಲ್ಲಿ ಬೇಕಾಗಿದ್ದ ಕೆಎಸ್ ರಾವ್ ನಗರ ನಿವಾಸಿ ಅನ್ಸಾರ್(20) ಎಂಬಾತನ ಮಾಹಿತಿ ಪಡೆದು ನೋಟಿಸ್ ಜಾರಿ ಮಾಡಲು ಆರೋಪಿಯ ಸಂಬಂಧಿಕರ ಮನೆಗೆ ಹೋಗುತ್ತಿದ್ದಂತೆ ಆರೋಪಿಯ ಸಂಬಂಧಿಕರ ಮನೆಯವರು ಬಾಗಿಲು ಮುಚ್ಚಿದ್ದರು ಎನ್ನಲಾಗಿದ್ದು, ಈ ಸಂದರ್ಭ ಮುಲ್ಕಿ ಪೊಲೀಸರು ಅನೇಕ ಸೂಚನೆಗಳನ್ನು ನೀಡಿದರೂ ಮನೆಯವರು ಬಾಗಿಲು ತೆರೆಯದ ಕಾರಣ ಪೊಲೀಸರು ಬಾಗಿಲು ಒಡೆದು ಒಳ ನುಗ್ಗಿದರೆನ್ನಲಾಗಿದ್ದು, ಈ ಸಂದರ್ಭ ಮನೆಯರು ಹಾಗೂ ಪೊಲೀಸರ ನಡುವೆ ತಳ್ಳಾಟ ನಡೆದಿದೆ ಎಂದು ತಿಳಿದುಬಂದಿದೆ.
ಈ ನಡುವೆ ಆರೋಪಿ ಕತ್ತಿಯಿಂದ ಮುಲ್ಕಿ ಎಎಸ್ಐ ಅಶೋಕ ಅವರಿಗೆ ಹಲ್ಲೆ ನಡೆಸಿದ್ದಾನೆ ಎಂದು ಅಶೋಕ್ ದೂರು ನೀಡಿದ್ದು, ಗಾಯಗೊಂಡ ಅವರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮನೆಯ ಒಳಗೆ ಆರೋಪಿಗಳಾದ ಅನ್ಸಾರ್, ಸಾದಿಕ್, ಮತ್ತಿಬ್ಬರು ಮಹಿಳೆಯರು ಸೇರಿ ತನ್ನ ಕುತ್ತಿಗೆ ಹಿಡಿದು ಕತ್ತಿಯಿಂದ ಕೈಗೆ ಹಲ್ಲೆ ನಡೆಸಿದ್ದು ಅವಾಚ್ಯ ಶಬ್ದಗಳಿಂದ ಮುಲ್ಕಿ ಎಎಸ್ಐ ಹಾಗೂ ಇನ್ಸ್ ಪೆಕ್ಟರ್ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಎಎಸ್ಐ ಅಶೋಕ್ ಮುಲ್ಕಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ. ಆದರೆ ಮನೆಯಲ್ಲಿದ್ದ ಆರೋಪಿ ಅನ್ಸಾರ್ ದೊಡ್ಡಮ್ಮ ಮುಮ್ತಾಝ್ (47) ಮುಲ್ಕಿ ಎಎಸ್ಐ ಅಶೋಕ್ ಅವರ ಆರೋಪವನ್ನು ನಿರಾಕರಿಸಿದ್ದು, ತಮ್ಮ ಮೇಲೆ ಮುಲ್ಕಿ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿದ್ದಾರೆ.
ಚಾಕು ಇರಿತದಿಂದ ಗಾಯಗೊಂಡಿರುವ ಅನ್ಸಾರ್ ನನ್ನು ಮುಕ್ಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನ್ಸಾರ್ ತಂದೆ ಸಾದಿಕ್, ದೊಡ್ಡಮ್ಮ ಮುಮ್ತಾಝ್ ಮುಲ್ಕಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಆರೋಪ-ಪ್ರತ್ಯಾರೋಪಗಳ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಪಣಂಬೂರು ಎಸಿಪಿ ಮಹೇಶ್ ಕುಮಾರ್, ಇನ್ಸ್ ಪೆಕ್ಟರ್ ಅಝ್ಮತ್ ಆಲಿ, ಸುರತ್ಕಲ್ ಇನ್ಸ್ ಪೆಕ್ಟರ್ ಚಂದ್ರಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.