ಮಂಗಳೂರು: ಸುರತ್ಕಲ್ ಸಮೀಪದ ಲೈಟ್ ಹೌಸ್ ಬೀಚ್ ನಲ್ಲಿ ಸ್ನೇಹಿತನೊಂದಿಗೆ ಈಜಲು ಹೋದ ಯುವಕ ಸಮುದ್ರ ಪಾಲಾಗಿರುವ ಘಟನೆ ನಡೆದಿದೆ.
ಕಾಣೆಯಾದವರನ್ನು ಕಾನ ನಿವಾಸಿ ಸುರೇಶ್ ಪ್ರಸಾದ್ ಯಾದವ್ ಅವರ ಮಗ ಸತ್ಯಂ (18) ಎಂದು ಗುರುತಿಸಲಾಗಿದೆ. ಇವರು ಕೆಪಿಟಿ ತಾಂತ್ರಿಕ ಕಾಲೇಜಿನಲ್ಲಿ ಡಿಪ್ಲೋಮಾ ಫೈನಲ್ ನಲ್ಲಿ ಕಲಿಯುತ್ತಿದ್ದರು.
ಸತ್ಯಂ ಮತ್ತು ಅವರ ಸ್ನೇಹಿತ ಎಂಆರ್ಪಿಎಲ್ ಕ್ವಾಟ್ರಸ್ನಲ್ಲಿ ವಾಸವಾಗಿದ್ದ ಪ್ರಭಾಕರನ್ (19) ಎಂಬವರು ಜೊತೆಗೆ ಮಧ್ಯಾಹ್ನ 3.15ರ ಸುಮಾರಿಗೆ ಲೈಟ್ ಹೌಸ್ ಬೀಚ್ಗೆ ಬಂದಿದ್ದರು. ಈ ವೇಳೆ ಸ್ನೇಹಿತರಿಬ್ಬರೂ ಸಮುದ್ರಕ್ಕೆ ಇಳಿದಿದ್ದು , ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರೂ ಸಮುದ್ರ ಪಾಲಾಗಿದ್ದಾರೆ.
ಈ ವೇಳೆ ಮತ್ತೋರ್ವ ಪ್ರಭಾಕರನ್ ಈಜಿ ದಡ ಸೇರಿದ್ದು , ಸತ್ಯಂ ಸಮುದ್ರಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಸ್ಥಳೀಯ ಮೀನುಗಾರರು ಸತ್ಯಂ ಅವರ ಹುಡುಕಾಟದಲ್ಲಿ ತೊಡಗಿದ್ದಾರೆ. ಘಟನಾ ಸ್ಥಳಕ್ಕೆ ಸುರತ್ಕಲ್ ಪೊಲೀಸರು ಭೇಟಿ ನೀಡಿ ಪ್ರಭಾಕರನ್ ಅವರಿಂದ ಮಾಹಿತಿ ಕಲೆಹಾಕಿದ್ದು , ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.