ಮಂಗಳೂರು: ಸೆಪ್ಟೆಂಬರ್ 28ರಂದು ನಡೆಯುವ ಮುಸ್ಲಿಮರ ಹಬ್ಬ ಈದ್ ಮಿಲಾದ್ ಪ್ರಯುಕ್ತ ಮೀನು ವ್ಯಾಪಾರಕ್ಕೆ ಕಡ್ಡಾಯ ರಜೆ ಘೋಷಣೆ ಮಾಡಿದ ಬ್ಯಾನರ್ ಅನ್ನು ಮೀನು ವ್ಯಾಪಾರಸ್ಥರ ಸಂಘದ ಹೆಸರಿನಲ್ಲಿ ಆಳವಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಟೋ ವೈರಲ್ ಆಗುತ್ತಿದ್ದು ಈ ಬಗ್ಗೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತ ಪಡಿಸಿದೆ.
ಹಸಿ ಮೀನು ವ್ಯಾಪಾರಿಗಳ ಗಮನಕ್ಕೆ, ಮುಂಬರುವ ಈದ್ ಮಿಲಾದ್ ರಜೆಯ ಬಗ್ಗೆ ಸೂಚನೆ. ವ್ಯಾಪಾರಸ್ಥರ ಸಂಘದ ನಿರ್ಧಾರದಂತೆ 28.09. 2023ರ ಮುಂಜಾನೆ ಗಂಟೆ 3.45ರ ನಂತರ ಹಸಿ ಮೀನು ವ್ಯಾಪಾರಸ್ಥರು ಕಡ್ಡಾಯವಾಗಿ ರಜೆ ಮಾಡಬೇಕು. ರಜೆ ಮಾಡದೆ ಕಾನೂನನ್ನು ಉಲ್ಲಂಘಿಸಿದಲ್ಲಿ 1 ತಿಂಗಳ ಕಾಲ ವ್ಯಕ್ತಿಯು ಬಂದರು ಧಕ್ಕೆಯಲ್ಲಿ ವ್ಯಾಪಾರ ಮಾಡದಂತೆ ಸಂಘವು ಕಾನೂನು ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ದಂಡನೆ ವಿಧಿಸಬೇಕಾಗುತ್ತದೆ. ಹಾಗೂ ಸಂಘದ ಯಾವುದೇ ಸಹಕಾರದಿಂದ ವಂಚಿತರಾಗಬೇಕಾಗುತ್ತದೆ. ಹಾಗಾಗಿ ತಪ್ಪದೇ ಕಾನೂನನ್ನು ಪಾಲಿಸಬೇಕಾಗಿ ವಿನಂತಿ- ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಹಸಿ ಮೀನು ವ್ಯಾಪಾರಸ್ಥರ ಸಂಘ ಬಂದರು ಮಂಗಳೂರು ಎಂದು ಬರೆದು ಬ್ಯಾನರ್ ಅನ್ನು ಅಳವಡಿಸಿದ್ದಾರೆ.
ಈಗ ಈ ಬ್ಯಾನರ್ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಪರ ಸಂಘಟನೆಗಳ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಧಕ್ಕೆಯಲ್ಲಿ ಶರಿಯತ್ ಕಾನೂನು ಜಾರಿಯಲ್ಲಿದೆಯಾ ಎಂದು ಪ್ರಶ್ನೆ ಮಾಡಿದ್ದಾರೆ. ವಿಶ್ವಹಿಂದೂ ಪರಿಷತ್ನ ಮುಖಂಡ ಶರಣ್ ಪಂಪುವೆಲ್ ಅವರು, ಬೆದರಿಕೆಯ ತಂತ್ರಕ್ಕೆ ಹಿಂದೂ ಮೀನುಗಾರರು ಮಣಿಯಬಾರದು. ನಿಮ್ಮೊಂದಿಗೆ ಇಡೀ ಹಿಂದೂ ಸಮಾಜವಿದೆ. ಪೊಲೀಸ್ ಇಲಾಖೆ ತಕ್ಷಣ ಈ ಬ್ಯಾನರ್ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಲಿʼʼ ಎಂದು ಒತ್ತಾಯ ಮಾಡಿದ್ದಾರೆ.