
ಮಂಗಳೂರು: ಮೈಸೂರು ದಸರಾ ಬಳಿಕ ರಾಜ್ಯದ ಗಮನ ಸೆಳೆಯುವ ಮಂಗಳೂರು ದಸರಾಗೆ ಪ್ರವಾಸಿಗರನ್ನು ಆಕರ್ಷಿಸಲು ಕೆಎಸ್ಆರ್ಟಿಸಿ ನೂತನ ಪ್ರಯೋಗ ಮಾಡಿದೆ. ಮಂಗಳೂರು ದಸರಾ ದರ್ಶನ ಎಂಬ ಪರಿಕಲ್ಪನೆಯಡಿ ಒಂದು ಇಡೀ ದಿನ ಮಂಗಳೂರಿನ ಒಂಭತ್ತು ದೇವಸ್ಥಾನಗಳನ್ನು ಸಂದರ್ಶಿಸುವ ಪ್ಯಾಕೇಜ್ ಟೂರ್ ಅನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಾಡಿದೆ.

ಕೆಎಸ್ಆರ್ಟಿಸಿ ವತಿಯಿಂದ ‘ಮಂಗಳೂರು ದಸರಾ ದರ್ಶನ’ ಪ್ರವಾಸ ಪ್ಯಾಕೇಜ್ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5ರ ವರೆಗೆ ನಡೆಯಲಿದೆ. ದಸರಾ ವೇಳೆ ಮಂಗಳೂರಿನ ಸುತ್ತ ಮುತ್ತಲಿನ ದೇವಸ್ಥಾನಗಳಿಗೆ ಧಾರ್ಮಿಕ ಪ್ರವಾಸ ಈ ಟೂರ್ ಪ್ಯಾಕೇಜ್ನ ಉದ್ದೇಶವಾಗಿದೆ. ಮಂಗಳೂರಿನ ಪ್ರಸಿದ್ಧ 10 ವಿವಿಧ ದೇವಸ್ಥಾನಗಳಿಗೆ ಈ ಪ್ರವಾಸ ಪ್ಯಾಕೇಜ್ ಇರಲಿದ್ದು, ಊಟ, ಉಪಹಾರ ಹೊರತು ಪಡಿಸಿ, ಪ್ರತಿ ಪ್ರಯಾಣಿಕರಿಗೆ ಕನಿಷ್ಠ ದರ ನಿಗದಿಪಡಿಸಲಾಗಿದೆ.
ಒಂದು ದಿನದ ಪ್ರವಾಸ ಇದಾಗಿದ್ದು, ಬೆಳಗ್ಗೆ ಹೊರಟರೆ, ದೇವಸ್ಥಾನಗಳ ದರ್ಶನ ಮುಗಿಸಿ ಸಂಜೆ ವೇಳೆಗೆ ವಾಪಸ್ ಆಗಬಹುದು. ಹಸಿರು ಬಣ್ಣದ ನರ್ಮ್ ಬಸ್ ಅನ್ನು ಇದಕ್ಕೆ ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ. ಒಂದು ಬಸ್ನಲ್ಲಿ 40 ಜನರಿಗೆ ಮಾತ್ರ ಅವಕಾಶ ಇರುತ್ತದೆ.









