ಮಂಗಳೂರು: ಗಾಂಜಾ ಮಾರಾಟ ಆರೋಪದಲ್ಲಿ ಮೆಡಿಕಲ್ ಕಾಲೇಜು ವಿದ್ಯಾರ್ಥಿ ಸಹಿತ ಮೂರು ಮಂದಿಯನ್ನು ಮಂಗಳೂರು ದಕ್ಷಿಣ ಠಾಣೆ ಮತ್ತು ಮಂಗಳೂರು ಸಿಸಿಬಿ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ದಸ್ತಗಿರಿ ಮಾಡಿದ್ದಾರೆ.
ವೆಲೆನ್ಸಿಯಾ, ಗೋರಿಗುಡ್ಡೆಯ ಪ್ರಜ್ವಲ್ ಫಿನ್ಹಾನ್, ಸಕಲೇಶಪುರದ ಧ್ರುವ ಶೆಟ್ಟಿ ಮತ್ತು ಕುಳಾಯಿಯ ಶಿವಾನಿ ಬಂಧಿತ ಆರೋಪಿಗಳು. ಬಂಧಿತರು ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ, ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದರೆನ್ನಲಾಗಿದೆ.
ದಕ್ಷಿಣ ಪೊಲೀಸ್ ಠಾಣೆಯ ಪಿಎಸ್ಐ ಶೀತಲ್ ಅಲಗೂರು ರವರಿಗೆ ಬಂದ ಮಾಹಿತಿ ಮೇರೆಗೆ ಆರೋಪಿ ಪ್ರಜ್ವಲ್ ಫಿನ್ಹಾನ್ ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದಾಗ ಆತನ ಮಾಹಿತಿ ಮೇರೆಗೆ ಉಳಿದ ಆರೋಪಿಗಳನ್ನು ಸಿಸಿಬಿ ಘಟಕದ ಅಧಿಕಾರಿಗಳು ಬಂಧಿಸಿದ್ದಾರೆ.
ಆರೋಪಿಗಳ ಪೈಕಿ ಪ್ರಜ್ವಲ್ ಎಂಬಾತನು ಮಹಾರಾಷ್ಟ್ರ ರಾಜ್ಯದಿಂದ ಗಾಂಜಾವನ್ನು ಖರೀದಿ ಮಾಡಿಕೊಂಡು ಬಂದು ಮಂಗಳೂರಿನಲ್ಲಿ ಆತನ ಸ್ನೇಹಿತರಾದ ಧ್ರುವ ಶೆಟ್ಟಿ ಮತ್ತು ಶಿವಾನಿ ಅವರಿಗೆ ನೀಡಿ ಅವರ ಮೂಲಕ ಕಾಲೇಜು ವಿದ್ಯಾರ್ಥಿಗಳಿಗೆ, ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.