


ಮಂಗಳೂರು: ನಗರದ ಬಿಜೈ ಕಾಪಿಕಾಡ್ ಮತ್ತು ಕೊಟ್ಟಾರ ಕ್ರಾಸ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದ ಮೇರೆಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಹಿತ 6 ಮಂದಿಯನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ರುತಿನ್ , ಹರಿಕೃಷ್ಣನ್ ಕೆ.ಆರ್, ಆಕಾಶ್ ಕೆ, ಅಕ್ಷಯ್, ಮಾರ್ಟಿನ್, ವಸಂತ್ ಕುಮಾರ್ ಎನ್ನಲಾಗಿದೆ.

ಘಟನೆಯ ವಿವರ:
ಉರ್ವ ಪೊಲೀಸರು ನಿನ್ನೆ ಮುಂಜಾನೆ ಗಸ್ತು ತಿರುಗುತ್ತಿದ್ದ ವೇಳೆ ಕಾಪಿಕಾಡ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ರುತಿನ್, ಹರಿಕೃಷ್ಣನ್, ಆಕಾಶ್, ಅಕ್ಷಯ್, ಮಾರ್ಟಿನ್ ಎಂಬವರು ಸೇರಿ ಸಿಗರೇಟನ್ನು ಸೇದುತ್ತಿರುವುದು ಕಂಡು ಬಂದಿದೆ.

ಬಳಿಕ ಅವರನ್ನು ವಿಚಾರಣೆ ನಡೆಸಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಇನ್ನು ಆರೋಪಿಗಳು ಇಂಜಿನಿಯರಿಂಗ್ ಕಾಲೇಜೊಂದರ ವಿದ್ಯಾರ್ಥಿಗಳೆಂದು ತಿಳಿದುಬಂದಿದೆ.

ಮತ್ತೊಂದು ಪ್ರಕರಣದಲ್ಲಿ ಕೊಟ್ಟಾರ ಕ್ರಾಸ್ ಬಳಿ ಉರ್ವ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ದೇರೆಬೈಲ್ ದಡ್ಡಲ್ ಕಾಡ್ ನಿವಾಸಿ ವಸಂತ್ ಕುಮಾರ್ ಎಂಬಾತ ಸಿಗರೇಟ್ ಸೇವನೆ ಮಾಡುತ್ತಿದ್ದ. ಈತನನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.










