ಮಂಗಳೂರು: ಸರಗಳ್ಳತನಕ್ಕೆ ಸಂಬಂಧಿಸಿದಂತೆ ಇಬ್ಬರು ಸರಗಳ್ಳರನ್ನು ಹಾಗೂ ಕಳ್ಳ ಮಾಲು ಖರೀದಿಸಿದ ಇಬ್ಬರನ್ನು ಸೇರಿದಂತೆ ಒಟ್ಟು ನಾಲ್ವರನ್ನು ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಸರಗಳ್ಳರು ಪಾರ್ಕ್ ಮಾಡಿದ್ದ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿ ಅದೇ ವಾಹನದಲ್ಲಿ ತೆರಳಿ ಬೇರೆ ಬೇರೆ ಕಡೆ ಮಹಿಳೆರಿಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಗರಿಸಿದ್ದರು.
ಕದ್ದ ಚಿನ್ನ ವನ್ನು ಕಾವೂರಿನ ನಕ್ಷತ್ರ ಎಂಬ ಚಿನ್ನದಂಗಡಿಯವರು ಖರೀದಿ ಮಾಡಿದ್ದು ಆ ಅಂಗಡಿಯ ಇಬ್ಬರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.
ಆರೀಫ್(26), ಮೊಹಮ್ಮದ್ ಹನೀಫ್ (36), ಬಂಧಿತ ಸರಗಳ್ಳರು. ಅಬ್ದುಲ್ ಸಮದ್ ಪಿ.ಪಿ ಹಾಗೂ ಮೊಹಮ್ಮದ್ ರಿಯಾಝ್ ಕದ್ದ ಮಾಲು ಖರೀದಿಸಿ ಬಂಧಿತರಾದವರು.
ಆರೋಪಿ ಮೊಹಮ್ಮದ್ ಹನೀಫ್ ಮಾ. 26 ರಂದು ಮಂಗಳೂರು ಗ್ರಾಮಾಂತರ ಪೊಲೀಸು ಠಾಣಾ ವ್ಯಾಪ್ತಿಯ ಕೆಲರೈ ಎಂಬಲ್ಲಿ ಪಾರ್ಕ್ ಮಾಡಿದ್ದ ಒಂದು ಆಕ್ಸಿಸ್ ದ್ವಿಚಕ್ರ ವಾಹವನ್ನು ಕಳವು ಮಾಡಿ ಅದೇ ದ್ವಿಚಕ್ರ ವಾಹನವನ್ನು ಉಪಯೋಗಿಸಿ, ಕಾವೂರು ಪೊಲೀಸು ಠಾಣಾ ವ್ಯಾಪ್ತಿಯ ಬೊಲ್ಲು ಗುಡ್ಡೆ ಎಂಬಲ್ಲಿ ನಡೆದುಕೊಂಡು ಹೋಗುತ್ತಿದ್ದ ವತ್ಸಲಾ ಎಂಬ ಮಹಿಳೆಯ ಕುತ್ತಿಗೆಯಲ್ಲಿದ್ದ ಸುಮಾರು 10 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ದಾರಿ ಕೇಳುವ ನೆಪದಲ್ಲಿ ಸುಲಿಗೆ ಮಾಡಿದ್ದ.
ಅಲ್ಲದೇ ಆರೋಪಿಗಳು ಏ. 12 ರಂದು ನೀರುಮಾರ್ಗ ಗ್ರಾಮದ ಪಾಲನೆ ಎಂಬಲ್ಲಿ ಮಮತಾ ಎಂಬ ಮಹಿಳೆಯ ಕುತ್ತಿಗೆಯಲ್ಲಿದ್ದ ಎಂಟು ಗ್ರಾಮದ ಮಂಗಳ ಸೂತ್ರವನ್ನು ಮೋಟಾರು ಸೈಕಲ್ ನಲ್ಲಿ ಬಂದು ದಾರಿ ಕೇಳುವ ನೆಪದಲ್ಲಿ ದೋಚಿದ್ದರು.
ನಂತರ ಚಿನ್ನಾಭರಣವನ್ನು ಕಾವೂರಿನ ನಕ್ಷತ್ರ ಜ್ಯುವೆಲ್ಲರಿಗೆ ಮಾರಾಟ ಮಾಡಿದ್ದ.
ಆರೋಪಿ ಆರೀಫ್ ವಿರುದ್ಧ ಈ ಹಿಂದೆ ಸುಲಿಗೆ, ಕೊಲೆಯತ್ನ, ಮನೆ ಕಳ್ಳತನ ಸೇರಿ 18 ಪ್ರಕರಣ ಹಾಗೂ ಮೊಹಮ್ಮದ್ ಹನೀಫ್ ವಿರುದ್ಧ ಒಂದು ಸುಲಿಗೆ ಪ್ರಕರಣ ದಾಖಲಾಗಿತ್ತು.
ಬಂಧಿತ ಆರೋಪಿಗಳಿಂದ 80 ಸಾವಿರ ಮೌಲ್ಯದ 18 ಗ್ರಾಂ ಚಿನ್ನದ 2 ಮಾಂಗಲ್ಯ ಸರ ಹಾಗೂ ಕೃತ್ಯಕ್ಕೆ ಉಪಯೋಗಿಸಿದ 2 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.