

ಮಂಗಳೂರು: ಮಾಜಿ ಪ್ರಿಯಕರ ಪ್ರೇಯಸಿಯ ಕೊಲೆಗೆ ಯತ್ನಿಸಿದ್ದಾನೆಂಬ ಆರೋಪದಲ್ಲಿ ಪಾಂಡೇಶ್ವರ ಮಹಿಳಾ ಠಾಣೆಯ ಪೊಲೀಸರು ಆರೋಪಿ ಶಿವರಾಜ್ ಕುಲಾಲ್ ನನ್ನು ಅರೆಸ್ಟ್ ಮಾಡಿದ್ದಾರೆ.
ಬಂಟ್ವಾಳ ತಾಲೂಕಿನ ಕಸಬ, ನಿವಾಸಿ ಶಿವರಾಜ್ ಕುಲಾಲ್(28) ಬಂಧಿತ ಆರೋಪಿ, ಹಳೆಯಂಗಡಿ ನಿವಾಸಿ ಅಶ್ವಿನಿ ಎಂಬಾಕೆ ಆರೋಪಿ ಶಿವರಾಜ್ ಕುಲಾಲ್ ಮೇಲೆ ದೂರು ದಾಖಲಿಸಿದ್ದಾರೆ. ಸಂತ್ರಸ್ತಗೆ ಈ ಹಿಂದೆ ಬೇರೆ ವಿವಾಹವಾಗಿತ್ತು. ಆದರೆ ಪತಿಯೊಂದಿಗೆ ಮನಸ್ತಾಪ ಹೊಂದಿರುವ ಆಕೆ ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಪ್ರಕರಣ ವಿಚಾರಣೆಯ ಹಂತದಲ್ಲಿದೆ. ಈ ನಡುವೆ ಆಕೆ ಎರಡು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪರಿಚಿತವಾದ ಶಿವರಾಜ್ ಕುಲಾಲ್ ನನ್ನು ಪ್ರೀತಿಸುತ್ತಿದ್ದರು.
ಆದರೆ ಆರು ತಿಂಗಳ ಹಿಂದೆ ಶಿವರಾಜ್ ಕುಲಾಲ್ ಅಶ್ವಿನಿಗೆ ಮಾನಸಿಕ ಹಿಂಸೆ ನೀಡಿ, ಮಾನಭಂಗಕ್ಕೆ ಯತ್ನಿಸಿದನೆಂದು ಆರೋಪಿಯಿಂದ ದೂರವಾಗಿದ್ದರು. ಆದರೆ ಮೇ 17ರಂದು ಸಂಜೆ 6.30ರ ಸುಮಾರಿಗೆ ಬಳ್ಳಾಲ್ ಬಾಗ್ ನಲ್ಲಿ ಸಂತ್ರಸ್ತೆಯು ಕೆಲಸ ಮುಗಿಸಿಕೊಂಡು ಹೊರಟಾಗ ಕೈಹಿಡಿದೆಳೆದು, ಕುತ್ತಿಗೆ ಹಿಡಿದು ಕೊಲೆಗೆ ಯತ್ನಿಸಿದ್ದನೆಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿ ಶಿವರಾಜ್ ಕುಲಾಲ್ ನನ್ನು ಬಂಧಿಸಿರುವ ಪೊಲೀಸರು ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.









