ಮಂಗಳೂರು: ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರವರ ಜನ್ಮ ದಿನದ ಪ್ರಯುಕ್ತ ದಿನಾಂಕ ಅ.19ನೇ ಮಂಗಳವಾರದಂದು ಮದರಸ ವಿದ್ಯಾರ್ಥಿಗಳ ಮೆರವಣಿಗೆಯನ್ನು ನಡೆಸಲು ಅನುಮತಿಯನ್ನು ನೀಡುವಂತೆ ಹಾಗೂ ಜಿಲ್ಲೆಯ ನಾನಾ ಕಡೆ ಪ್ರವಾದಿ(ಸ.ಅ) ಹಾಗೂ ಮುಸ್ಲಿಮ್ ಸಮುದಾಯದವರನ್ನು ನಿಂದಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಂಗಳೂರು ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಅವರಿಗೆ ದ.ಕ.ಜಿಲ್ಲಾ ಸಮಸ್ತ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ನ ವತಿಯಿಂದ ಶನಿವಾರ ಮನವಿಯನ್ನು ನೀಡಿ ವಿನಂತಿಸಲಾಯಿತು.
ಮನವಿಯನ್ನು ಆಲಿಸಿದ ಪೊಲೀಸ್ ಆಯುಕ್ತರು ಮಿಲಾದುನ್ನಬಿ ದಿನದಂದು ಸರಕಾರದ ನಿರ್ದೇಶನ ಹಾಗೂ ನೀತಿ, ನಿಯಮಗಳನ್ನು ಪಾಲಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಅಸೋಸಿಯೇಶನ್ ನ ಅಧ್ಯಕ್ಷ ಐ.ಮೊಹಿದಿನಬ್ಬ ಹಾಜಿ ದ.ಕ, ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ಪ್ರಧಾನ ಕಾರ್ಯದರ್ಶಿ ಜನಾಬ್ ಹನೀಫ್ ಹಾಜಿ ಬಂದರ್, ಜಿಲ್ಲಾ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ಹಾಜಿ ಕೊಡಾಜೆ, ಕೋಶಾಧಿಕಾರಿ ಮೆಟ್ರೋ ಸಾಹುಲ್ ಹಮೀದ್ ಹಾಜಿ, ಉಪಾಧ್ಯಕ್ಷ ಇಬ್ರಾಹಿಮ್ ಕೋಣಾಜೆ ಮತ್ತು ಮಂಗಳೂರು ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ನ ಅಧ್ಯಕ್ಷ ರಿಯಾಝ್ ಹಾಜಿ ಬಂದರ್ ಉಪಸ್ಥಿತರಿದ್ದರು.