ಮಂಗಳೂರು: ಮಂಗಳೂರು ನಗರದ ಕೊಟ್ಟಾರ ಚೌಕಿಯಲ್ಲಿ ಡಿ. 3 ರಂದು ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿ ಇಂಜಿನಿಯರ್ ಮೇಘ ರಂಜಿತ್ ಪೈ (34 ವರ್ಷ) ಎಂಬವರೇ ಮೃತ ದುರ್ದೈವಿ. ಮಂಗಳೂರು ಮೂಲದ ಮೇಘ ರಂಜಿತ್ ಪೈ ಅವರು ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಪತಿಯ ಜೊತೆಗೆ ಬೆಂಗಳೂರಿನ ಜೆಪಿ ನಗರದ ಬೇಗೂರಿನಲ್ಲಿ ವಾಸವಾಗಿದ್ದರು. ಮೊನ್ನೆಯಷ್ಟೇ ತನ್ನ ತಾಯಿಯನ್ನು ನೋಡಲು ಮನೆಗೆ ಬಂದಿದ್ದರು. ನಗರದ ಕೊಟ್ಟಾರ ಚೌಕಿಯ ಕಲ್ಲುರ್ಟಿ ದೇವಸ್ಥಾನದ ಎದುರಿನಲ್ಲಿ ಮೇಘ ಅವರು ರಸ್ತೆ ದಾಟುತ್ತಿದ್ದ ವೇಳೆಯಲ್ಲಿ, ದ್ವಿಮುಖ ರಸ್ತೆಯಲ್ಲಿ ವಿರುದ್ದ ದಿಕ್ಕಿನಲ್ಲಿ ಬಂದ ಗೋಲ್ಡನ್ ಹೆಸರಿನ ಬಸ್ಸು ಢಿಕ್ಕಿ ಹೊಡೆದಿದೆ. ಇದರಿಂದಾಗಿ ಮೇಘ ಪೈ ಅವರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ತುರ್ತು ನಿಗಾ ಘಟಕದಲ್ಲಿ ಎರಡು ದಿನಗಳ ಕಾಲ ಚಿಕಿತ್ಸೆ ಪಡೆದಿದ್ದರೂ ಕೂಡ ಮೇಘ ರಂಜಿತ್ ಪೈ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಘಟನೆಗೆ ಚಾಲಕ ಶ್ರವಣ್ ಕುಮಾರ್ ನಿರ್ಲಕ್ಷ್ಯವೇ ಹಾಗೂ ಅಜಾಗರೂಕತೆಯೇ ಕಾರಣ ಎಂದು ಮೇಘ ಪೈ ಅವರ ಪತಿ ರಂಜಿತ್ ಪೈ ಅವರು ಪಾಂಡೇಶ್ವರದ ಸಂಚಾರಿ ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.