Monday, July 20, 2026
spot_imgspot_img
spot_imgspot_img

ಮಂಗಳೂರು: ವಾರೆಂಟ್ ಆರೋಪಿಯ ಬಂಧನದ ವೇಳೆ ಪೊಲೀಸರ ಮೇಲೆ ಹಲ್ಲೆ

- Advertisement -
- Advertisement -

ಮಂಗಳೂರು: ೨೦ಕ್ಕೂ ಅಧಿಕ ಪ್ರಕರಣಗಳ ಆರೋಪಿಯನ್ನು ಪೊಲೀಸರು ಬಂಧಿಸಲು ಬಂದಾಗ ಪೊಲೀಸ್‌ ಸಿಬ್ಬಂದಿ ಮೇಲೆ ಡ್ರ್ಯಾಗರ್‌ನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ಬಳಿಕ ಅಡಗಿದ್ದವನನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ತೋಡಾರು ಗ್ರಾಮದ ಹಿದಾಯತ್ ನಗರದ ಮಹಮ್ಮದ್‌ ಫೈಜಲ್‌ ಅಲಿಯಾಸ್‌ ಕ್ಯಾಬರೆ ಫೈಜಲ್‌ ಎನ್ನಲಾಗಿದೆ.

ಮೂಡುಬಿದಿರೆ, ವೇಣೂರು, ಮಂಗಳೂರು ಗ್ರಾಮಾಂತರ, ಲಿಂಗದಹಳ್ಳಿ, ಅಜೆಕಾರು ಠಾಣೆಗಳಲ್ಲಿ ಒಟ್ಟು 15 ಪ್ರಕರಣಗಳು ದಾಖಲಾಗಿವೆ. ಮೂಡುಬಿದಿರೆ ಠಾಣೆಯೊಂದರಲ್ಲೇ ಆರೋಪಿ ವಿರುದ್ಧ ಆರು ಪ್ರಕರಣಗಳಿವೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರಕರಣಗಳು ಹಾಗೂ ಮೂಡುಬಿದಿರೆ ಠಾಣೆಯಲ್ಲಿ ದಾಖಲಾಗಿದ್ದ ಒಂದು ಪ್ರಕರಣದಲ್ಲಿ ಆತನ ವಿರುದ್ಧ ವಾರಂಟ್‌ ಜಾರಿಯಾಗಿತ್ತು. ಈ ಹಿನ್ನಲೆ ಬಂಧಿಸಲು ಬಂದ ಮೂಡುಬಿದಿರೆ ಠಾಣೆಯ ಪೊಲೀಸ್‌ ಸಿಬ್ಬಂದಿ ಮೇಲೆ ಕ್ಯಾಬರೆ ಫೈಜಲ್‌ ಡ್ರ್ಯಾಗರ್‌ನಿಂದ ಹಲ್ಲೆ ನಡೆಸಿ ತಪ್ಪಿಸಿಕೊಂಡಿದ್ದಾನೆ. ತೋಡಾರಿನಲ್ಲಿ ಹಾಡಿಯೊಂದರಲ್ಲಿ ಅವಿತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

‘ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ಬೇಕಾಗಿದ್ದ ಫೈಜಲ್‌ನ ಬಂಧನಕ್ಕೆ ಸಿವಿಲ್‌ ಮತ್ತು ಜೆಎಂಎಫ್‌ ನ್ಯಾಯಾಲಯ ವಾರಂಟ್‌ ಜಾರಿಮಾಡಿತ್ತು. ಆತನನ್ನು ಬಂಧಿಸಲು ಠಾಣೆಯ ಎಎಸ್‌ಐ ರಾಜೇಶ್‌ ಅವರು ಹೆಡ್‌ ಕಾನ್‌ಸ್ಟೆಬಲ್‌ ಅಯ್ಯಪ್ಪ ಜೊತೆಗೆ ಹಿದಾಯತ್‌ ನಗರದಲ್ಲಿರುವ ಆರೋಪಿ ಮನೆಗೆ ಶುಕ್ರವಾರ ಮಧ್ಯಾಹ್ನ ತೆರಳಿದ್ದರು. ಈ ವೇಳೆ ಆರೋಪಿಯ ತಂದೆ ಹಮೀದ್‌, ಪೊಲೀಸರು ಮನೆಯೊಳಗೆ ಪ್ರವೇಶಿಸಲು ಅಡ್ಡಿಪಡಿಸಿದ್ದರು. ವಾರಂಟ್‌ ತೋರಿಸಿದ ಬಳಿಕವೂ ಆರೋಪಿಯನ್ನು ವಶಕ್ಕೆ ಪಡೆಯಲು ಅವಕಾಶ ನೀಡಿರಲಿಲ್ಲ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮನೆಯೊಳಗಿದ್ದ ಫೈಜಲ್‌ ಹಿಂಬಾಗಿಲಿನಿಂದ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆಗ ಪೊಲೀಸ್ ಸಿಬ್ಬಂದಿ ಅಯ್ಯಪ್ಪ ಅವರು ಮನೆಯ ಹಿಂಬಾಗಿಲ ಬಳಿ ಹೋಗಿ ಬಾಗಿಲಿಗೆ ಅಡ್ಡಲಾಗಿ ನಿಂತಿದ್ದರು. ಆಗ ಆರೊಪಿಯು ಹರಿತವಾದ ಡ್ರ್ಯಾಗರ್‌ನಿಂದ ಅಯ್ಯಪ್ಪ ಅವರಿಗೆ ಇರಿದಿದ್ದಾನೆ. ಇದರಿಂದ ಅವರ ಬಲಗೈಗೆ ಗಾಯಗಳಾಗಿವೆ. ಎಎಸ್‌ಐ ರಾಜೇಶ್‌ ಅವರು ಅಯ್ಯಪ್ಪ ಅವರ ನೆರವಿಗೆ ಧಾರಿಸಿದಾಗ ಆರೋಪಿಯು, ‘ಹತ್ತಿರ ಬಂದರೆ ಕೊಲ್ಲುತ್ತೇನೆ’ ಎಂದು ಬೆದರಿಸಿ ಅಲ್ಲಿಂದ ತಪ್ಪಿಸಿಕೊಂಡಿದ್ದ.

ಬಳಿಕ ಪಿಎಸ್‌ಐಗಳಾದ ಸುದೀಪ್‌ ಹಾಗೂ ದಿವಾಕರ್‌ ಅವರನ್ನು ಸ್ಥಳಕ್ಕೆ ತೆರಳಿದ್ದರು. ಆರೋಪಿಗಾಗಿ ಹುಡುಕಿದಾಗ ಆತ ಸಮೀಪದ ಹಾಡಿಯಲ್ಲಿ ಅಡಗಿದ್ದ. ಆರೋಪಿಯನ್ನು ಸುತ್ತಿವರಿದು ಡ್ರ್ಯಾಗರ್‌ ಸಮೇತ ಬಂಧಿಸಲಾಗಿದೆ. ಆತನಿಗೂ ತರಚಿದ ಗಾಯಗಳಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!