ಮಂಗಳೂರು: ಎನ್ಟಿಕೆ ಬಳಿಯ ಸುರತ್ಕಲ್ ಟೋಲ್ಗೇಟ್ ತೆರವು ಮಾಡಬೇಕೆಂದು ಪ್ರತಿಭಟನೆ ನಡೆಸಲಿರುವ ಹೋರಾಟಗಾರರ ಮನೆಗೆ ರಾತ್ರೋರಾತ್ರಿ ಪೊಲೀಸರು ದೌಡಾಯಿಸಿ ನೋಟಿಸ್ ನೀಡಿರುವ ಘಟನೆ ನಡೆದಿದೆ.
ಟೋಲ್ ಹೋರಾಟಗಾರರ ಮನೆಗೆ ರಾತ್ರೋರಾತ್ರಿ ಮಂಗಳೂರು ಪೊಲೀಸರು ನುಗ್ಗಿದ್ದು ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಟೋಲ್ ಹೋರಾಟಗಾರರು ಆರೋಪಿಸಿದ್ದಾರೆ. ಇನ್ನು ಅಕ್ಟೋಬರ್ 18 ರಂದು ಸುರತ್ಕಲ್ ಟೋಲ್ ತೆರವುಗೊಳಿಸುವ ಹೋರಾಟಕ್ಕೆ ಹೋರಾಟ ಸಮಿತಿ ಕರೆಕೊಟ್ಟಿದ್ದು, ಇದಕ್ಕೆ ಅನೇಕ ಸಂಘಟನೆಗಳು ಬೆಂಬಲ ನೀಡಿದ್ದವು.
ಅಕ್ಟೋಬರ್ 18 ರಂದು ಸುರತ್ಕಲ್ ಟೋಲ್ ತೆರವುಗೊಳಿಸುವ ಉಗ್ರ ಹೋರಾಟಕ್ಕೆ ಹೋರಾಟ ಸಮಿತಿ ಕರೆಕೊಟ್ಟಿದ್ದು, ಬಿಜೆಪಿಯೇತರ ಎಲ್ಲಾ ವಿಪಕ್ಷಗಳು ಇದಕ್ಕೆ ಬೆಂಬಲ ನೀಡಿದ್ದವು. ಈ ಟೋಲ್ ವಿಚಾರವೂ ವಿಧಾನಸೌಧದಲ್ಲೂ ಸದ್ದು ಮಾಡಿದ್ದು, ಆಡಳಿತ ಪಕ್ಷಕ್ಕೆ ತಲೆನೋವು ಉಂಟು ಮಾಡಿತ್ತು. ಆದ್ದರಿಂದ ಜಿಲ್ಲಾಡಳಿತ ಮೂಲಕ ಹೋರಾಟವನ್ನು ಕೈಬಿಡುವಂತೆ ಹೋರಾಟ ಸಮಿತಿಯೊಂದಿಗೆ ಅನೇಕ ಸಭೆಗಳನ್ನು ನಡೆಸಿದ ಜಿಲ್ಲಾಡಳಿತ ಮನವಿಯನ್ನೂ ಮಾಡಿತ್ತು .
ಆದರೆ ಅದಕ್ಕೆ ಮಣಿಯದ 100 ಕ್ಕೂ ಅಧಿಕ ಪ್ರಮುಖ ಹೋರಾಟಗಾರರ ಮನೆ ಮೇಲೆ ಪೊಲೀಸರು ತಡರಾತ್ರಿ ದಾಳಿ ಮಾಡಿದ್ದು, ಹೋರಾಟಗಾರರು 2ಲಕ್ಷ ಮತ್ತು ಸರ್ಕಾರಿ ಜಾಮೀನಿನೊಂದಿಗೆ ಇಂದು ಬೆಳಗ್ಗೆ ಪೊಲೀಸ್ ಕಮೀಷನರ್ ಕಛೇರಿಗೆ ಹಾಜರಾಗುವಂತೆ ತಾಕೀತು ಮಾಡಿದ್ದಾರೆ.
ಮಹಿಳಾ ಹೋರಾಟಗಾರ್ತಿ ಪ್ರತಿಭಾ ಕುಳಾಯಿ ಮನೆಗೂ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಮಧ್ಯರಾತ್ರಿ ಪೊಲೀಸರನ್ನು ಹೋರಾಟಗಾರರ ಮನೆಗಳಿಗೆ ಕಳುಹಿಸುತ್ತೀರಾ ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತರೆ ? ಮಹಿಳಾ ಹೋರಾಟಗಾರರ ಮನೆಗೂ ಕಾಳರಾತ್ರಿ “ಗಂಡಸು” ಪೊಲೀಸರ ದಂಡು !! ಅದಕ್ಕೆಲ್ಲ ಜನ ಹೆದರುವ ಕಾಲ ಮುಗಿದಿದೆ. ತುಳುನಾಡಿನ ಮುಂದೆ ಬೆತ್ತಲಾಗುತ್ತಿದ್ದೀರಿ ಬಿಜೆಪಿಗರೆ ಎಚ್ಚರ ಎಂದು ಮುನೀರ್ ಕಾಟಿಪಳ್ಳ ವಾಗ್ದಾಳಿ ನಡೆಸಿದ್ದಾರೆ.