ಕಾಸರಗೋಡು: ಜಿಲ್ಲೆಯನ್ನು ಮಾದಕ ವಿಮುಕ್ತಗೊಳಿಸುವ ಉದ್ದೇಶದಿಂದ ಪೊಲೀಸರು ನಡೆಸುತ್ತಿರುವ ಕ್ಲೀನ್ ಕಾಸರಗೋಡು, ಕಾರ್ಯಾಚರಣೆ ಮುಂದುವರಿಯುತ್ತಿದೆ.
ಮಾರಕ ವಾದಕ ವಸ್ತುಗಳಾದ ಎಂ.ಡಿ.ಎಂ.ಎ, ಗಾಂಜಾ ಜೊತೆಗೆ ಪಾನ್ ಮಸಾಲೆ ಮಾರಾಟವೂ ಜಿಲ್ಲೆಯಲ್ಲಿ ವ್ಯಾಪಕಗೊಂಡಿದೆ.
ಮಂಜೇಶ್ವರ ಪೊಲೀಸರು ನಿನ್ನೆ ಹಾಗೂ ಇಂದು ಮುಂಜಾನೆ ನಡೆಸಿದ ಕಾರ್ಯಾಚರಣೆಯಲ್ಲಿ ವಿವಿಧೆಡೆಗಳಿಂದ ಎಂ.ಡಿ.ಎಂ.ಎ ಹಾಗೂ ಪಾನ್ ಮಸಾಲೆ ವಶಪಡಿಸಿಕೊಂಡು ನಾಲ್ಕು ಮಂದಿಯನ್ನು ಬಂಧಿಸಲಾಗಿದೆ.

ಎಸ್.ಐ ಅನ್ಸಾರ್ ನೇತೃತ್ವದ ಪೊಲೀಸರು ಇಂದು ಮುಂಜಾನೆ ಬಾಕ್ರಬೈಲು ಕಜೆ ಎಂಬಲ್ಲಿ ನಡೆಸಿದ ವಾಹನ ತಪಾಸಣೆ ವೇಳೆ ಎಂ.ಡಿ.ಎಂ.ಎ ವಶಪಡಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ತಾಲೂಕಿನ ಕೊಳ್ಳಾಡು ನಿವಾಸಿ ಸಿದ್ದಿಕ್ (30) ಎಂಬಾತನನ್ನು ಬಂಧಿಸಲಾಗಿದೆ. ಈತ ಚಲಾಯಿಸುತ್ತಿದ್ದ ಆಟೋ ರಿಕ್ಷಾವನ್ನು ವಶಪಡಿಸಲಾಗಿದೆ.
ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 4.72 ಗ್ರಾಂ ಎಂ.ಡಿ.ಎಂ.ಎ ವಶಪಡಿಸಲಾಗಿದೆ. ಈ ಬಗ್ಗೆ ಪಚ್ಲಂಪಾರೆ ನಿವಾಸಿ ಫೈಸಲ್ (27) ಎಂಬಾತನನ್ನು ಬಂಧಿಸಲಾಗಿದೆ.

ನಿನ್ನೆ ರಾತ್ರಿ 8.15ರ ವೇಳೆ ಮಂಜೇಶ್ವರ ಠಾಣೆಯ ಪ್ರೊಬೆಶನರಿ ಎಸ್. ರಜಿತ್ ನೇತೃತ್ವದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಉಪ್ಪಳ ಪತ್ವಾಡಿ ರಸ್ತೆಯಲ್ಲಿ ನಿಂತಿದ್ದ ಫೈಸಲ್ನ ಮೇಲೆ ಸಂಶಯಗೊಂಡು ಆತನನ್ನು ತಪಾಸಣೆ ನಡೆಸಿದಾಗ ಮಾದಕವಸ್ತು ಪತ್ತೆಯಾಗಿದೆ. ಈ ಸಂಬಂಧ ಈತನನ್ನು ಬಂಧಿಸಲಾಗಿದೆ.
ನಿನ್ನೆ ಮಧ್ಯಾಹ್ನ ಅಂಗಡಿಪದವಿನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ ವೇಳೆ ಮುಟ್ಟಂಗೇಟ್ ನಿವಾಸಿ ಬಾಲಕೃಷ್ಣ (40) ಎಂಬಾತನ ಕೈಯಿಂದ 56 ಪಾನ್ ಪ್ಯಾಕೆಟ್ ಪಾನ್ ಮಸಾಲೆ ವಶಪಡಿಸಲಾಗಿದೆ.

ಅದೇ ರೀತಿ ಉದ್ಯಾವರ ಪ್ರಥಮ ಸಿಗ್ನಲ್ ನಿವಾಸಿ ಮೊಹಮ್ಮದ್ ಕಲಂದರ್(29) ಎಂಬಾತನನ್ನು 93 ಪ್ಯಾಕೆಟ್ ಪಾನ್ ಮಸಾಲೆ ಸಹಿತ ಬಂಧಿಸಲಾಗಿದೆ. ನಿನ್ನೆ ತಡ ರಾತ್ರಿ ಎಸ್.ಐ. ಅನ್ಸಾರ್ ನೇತೃತ್ವದ ಪೊಲೀಸರು ಉದ್ಯಾವರಗುಡ್ಡೆ ಶಾಲೆ ಬಳಿ ನಡೆಸಿದ ಕಾರ್ಯಾಚರಣೆ ವೇಳೆ ಮೊಹಮ್ಮದ್ ಕಲಂದರ್ನ ಕೈಯಿಂದ ಪಾನ್ ಮಸಾಲೆ ವಶಪಡಿಸಲಾಗಿದೆ.









