ಮಣಿಪಾಲ : ವಾಹನವನ್ನು ಓವರ್ ಟೇಕ್ ಮಾಡಿದ ವಿಚಾರಕ್ಕೆ ಕಾರು ಚಾಲಕನನ್ನು ತಡೆದು ಹಲ್ಲೆ ನಡೆಸಿ ಬಳಿಕ ಪೊಲೀಸರಿಗೆ ದೂರು ನೀಡದಂತೆ ಜೀವ ಬೆದರಿಕೆ ಒಡ್ಡಿದ ಘಟನೆ ಇಂದ್ರಾಳಿಯಲ್ಲಿ ನಡೆದಿದೆ. ಚೇತನರಾಜ್ ಶೆಟ್ಟಿ ಎಂಬವರನ್ನು ಅಕ್ರಮ್, ಸೈಫ್, ಶರೀಫ್ ಎಂಬ ಮೂವರು ದುಷ್ಕರ್ಮಿಗಳು ತಡೆದು ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ.
ಚೇತನರಾಜ್ ಶೆಟ್ಟಿ ಅವರು ತಮ್ಮ ಕಾರಿನಲ್ಲಿ ಸರಳಬೆಟ್ಟಿನಿಂದ ಮಣಿಪಾಲದ ಟೈಗರ್ ಸರ್ಕಲ್ ಮಾರ್ಗವಾಗಿ ಉಡುಪಿ ಕಡೆಗೆ ಹೋಗುತ್ತಿರುವಾಗ ಸಿಂಡಿಕೇಟ್ ಸರ್ಕಲ್ ಬಳಿ ಅಕ್ರಮ್ ಮತ್ತು ಸೈಫ್ ಚಲಾಯಿಸಿ ಕೊಂಡು ಹೋಗುತ್ತಿದ್ದ ಕಾರನ್ನು ಓವರ್ ಟೇಕ್ ಮಾಡಿದ್ದರು. ಈ ವಿಚಾರದಲ್ಲಿ ಆರೋಪಿಗಳು ಚೇತನ್ ರಾಜ್ ಅವರ ಕಾರನ್ನು ಹಿಂಬಾಲಿಸಿಕೊಂಡು ಬಂದು ಇಂದ್ರಾಳಿಯಲ್ಲಿ ತಡೆದು ನಿಲ್ಲಿಸಿ ಹಲ್ಲೆ ಮಾಡಿದ್ದಾರೆ.
ಮಾತ್ರವಲ್ಲದೆ ಅವರನ್ನು ತಮ್ಮ ಕಾರಿನಲ್ಲಿ ಕುರಿಸಿಕೊಂಡು ಮಣಿಪಾಲದ ಪೆರಂಪಳ್ಳಿ ರಸ್ತೆಯಲ್ಲಿರುವ ಎಕೆಎಂಎಸ್ ಕಚೇರಿಗೆ ಕರೆದುಕೊಂಡು ಹೋಗಿ ಅಲ್ಲಿ ಸೈಫ್, ಅಕ್ರಮ್ ಹಾಗೂ ಶರೀಫ್ ಎಂಬವರು ಸೇರಿ ಚೇತನ ರಾಜ್ ಎಂಬವರಿಗೆ ಹಲ್ಲೆ ಮಾಡಿದ್ದು ಮಾತ್ರವಲ್ಲದೆ ಅವರ ಕಾರಿಗೂ ಹಾನಿ ಮಾಡಿದ್ದಾರೆ. ಈ ಬಗ್ಗೆ, ದೂರು ನೀಡದಂತೆ ಜೀವ ಬೆದರಿಕೆಯ ಎಚ್ಚರಿಕೆ ನೀಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ, ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.