ಮುಲ್ಕಿ : ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ಮಹಿಳೆಗೆ ಕಾರು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ಮಂಗಳೂರು ಮುಲ್ಕಿ ಠಾಣಾ ವ್ಯಾಪ್ತಿಯ ಕಿನ್ನಿಗೋಳಿಯಲ್ಲಿ ನಡೆದಿದೆ.
ಕಿನ್ನಿಗೋಳಿ ಚರ್ಚ್ ಕಡೆಯಿಂದ ಮಹಿಳೆಯೋರ್ವರು ತರಕಾರಿ ಹಿಡಿದುಕೊಂಡು ನಡೆದುಕೊಂಡು ಬರುತ್ತಿರುವ ಸಂದರ್ಭ ಸುರತ್ಕಲ್ ಕೃಷ್ಣಪುರದಿಂದ ಮೂಡಬಿದ್ರೆಯ ತೋಡಾರ್ ಕಡೆಗೆ ಸಂಚರಿಸುತ್ತಿದ್ದ ಬ್ರೀಜಾ ಕಾರು ಹೆದ್ದಾರಿ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಢಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಮಹಿಳೆ ಅನತಿ ದೂರಕ್ಕೆ ಉರುಳಿದ್ದು ಮಹಿಳೆ ಗಂಭೀರ ಗಾಯಗೊಂಡಿದ್ದಾರೆ. ಪಕ್ಷಿಕೆರೆ ಕೆಮ್ರಾಲ್ ನಿವಾಸಿ ಜಯಂತಿ ಶೆಟ್ಟಿ(50) ಗಾಯಗೊಂಡ ಮಹಿಳೆ. ಕಾರಿನಲ್ಲಿದ್ದ ಚಾಲಕ ಸೇರಿ ನಾಲ್ವರು ಗಾಯಗೊಂಡಿದ್ದು, ಕಿನ್ನಿಗೋಳಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳುಗಳಿಗೆ ಸ್ಥಳೀಯ ಅಂಗಡಿ ಮಾಲಿಕರಾದ ಅಲ್ವಿನ್, ಸ್ಯಾನೀ ಪಿಂಟೋ, ಶೈಲಾ ಸಿಕ್ವೇರಾ ಸಹಕರಿಸಿದ್ದಾರೆ. ಮಂಗಳೂರು ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ಭೀಕರ ದೃಶ್ಯ ಸ್ಥಳೀಯ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.