ಮುಸ್ಲಿಮರಿಗೆ ಮೀಸಲಿಟ್ಟ ಹಲವು ಯೋಜನೆಗಳನ್ನು ಸರಕಾರ ರದ್ದು ಗೊಳಿಸಿದೆ ಎಂಬ ಆರೋಪ ಸದನದಲ್ಲಿ ಕೇಳಿಬಂದಿದ್ದು, ಶಾದಿ ಮಹಲ್ ಯೋಜನೆ ಕೈಬಿಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿನ್ನೆ ಸದನದಲ್ಲಿ ಹೇಳಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಸಿ.ಎಂ.ಇಬ್ರಾಹಿಂ ಅವರ ಪ್ರಶ್ನೆಗೆ ಉತ್ತರಿಸಿ ಶಾದಿ ಮಹಲ್ ಯೋಜನೆ ನಿಲ್ಲಿಸಿರುವುದನ್ನು ದೃಢಪಡಿಸಿದ್ದಾರೆ. ಸಿ.ಎಂ.ಇಬ್ರಾಹೀಂ ಮಾತನಾಡಿ ಅಲ್ಪಸಂಖ್ಯಾತರಿಗೆ ರಾಜ್ಯದಲ್ಲಿ ಮೀಸಲಿಟ್ಟಿದ್ದ 77 ಯೋಜನೆಗಳಲ್ಲಿ ಈಗ 29 ಯೋಜನೆ ಮಾತ್ರ ಉಳಿದಿವೆ. ಅನೇಕ ಯೋಜನೆಗಳನ್ನು ಸರಕಾರ ರದ್ದುಗೊಳಿಸಿದೆ ಎಂದು ಆರೋಪಿಸಿದ್ದಾರೆ.
ಗಂಗಾ ಕಲ್ಯಾಣ ಯೋಜನೆ, ಪಿಎಚ್ಡಿ ವಿದ್ಯಾರ್ಥಿಗಳಿಗೆ ಸಹಾಯ ಧನ, ಹಣ್ಣು ವ್ಯಾಪಾರಿಗಳಿಗೆ ನೀಡಲಾಗುವ ಸಣ್ಣ ಪ್ರಮಾಣದ ಸಾಲ ಯೋಜನೆ ನಿಲ್ಲಿಸಲಾಗಿದೆ ಎಂದು ಆರೋಪ ಮಾಡಿದ್ದಾರೆ. ಜನ ಆರ್ಥಿಕ ಸಂಕಷ್ಟದಲ್ಲಿ ಇದ್ದಾರೆ. ಇಂತಹ ಸಂದರ್ಭದಲ್ಲಿ ಯೋಜನೆಗಳನ್ನು ಸರಕಾರ ಮುಂದುವರಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ, ಶಾದಿ ಮಹಲ್ ಯೋಜನೆ ಬಿಟ್ಟು ಇನ್ಯಾವುದೇ ಯೋಜನೆ ನಾವು ನಿಲ್ಲಿಸೊಲ್ಲ ಎಂದು ಭರವಸೆ ನೀಡಿದರು. ಗಂಗಾ ಕಲ್ಯಾಣ ಯೋಜನೆ ನಿಲ್ಲಿಸಿಲ್ಲ. ಪಿಹೆಚ್.ಡಿ ವಿದ್ಯಾರ್ಥಿಗಳಿಗೆ ಅನುದಾನ ಮುಂದುವರಿಸುತ್ತೇವೆ. ಅರಿವು ಯೋಜನೆಗೆ ಹೆಚ್ಚು ಅನುದಾನ ನೀಡಿದ್ದೇನೆ. ಜಿಲ್ಲೆಗೊಂದು ಅಬ್ದುಲ್ ಕಲಾಂ ಶಾಲೆ ಅಭಿವೃದ್ಧಿ ಮಾಡುತ್ತಿದ್ದೇವೆ. ಸಿಬಿಎಸ್ಇ ಕೋರ್ಸ್ ಪ್ರಾರಂಭ ಮಾಡುತ್ತಿದ್ದೇವೆ ಎಂದು ತಿಳಿಸಿದರು.