ಮೈಸೂರು: ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಯಾಗಿ ಬೆಂಗಳೂರಿಗೆ ಹೋಗುವ ಮುನ್ನ ಮೈಸೂರಿನ ಭೂ ಮಾಫಿಯಾದ ಬುಡಕ್ಕೆ ಕೊಡಲಿ ಇಟ್ಟು ಹೋಗಿದ್ದಾರೆ.
ವರ್ಗಾವಣೆಯ ದಿನವೇ ಹಲವು ಆದೇಶಗಳಿಗೆ ಸಹಿ ಹಾಕಿ ರೋಹಿಣಿ ಸಿಂಧೂರಿ ನಿರ್ಗಮಿಸಿದ್ದಾರೆ. ಡಿಸಿಯಾಗಿದ್ದ ಅವಧಿಯಲ್ಲಿ ಸಹಿ ಹಾಕಿದ್ದ ಕಡತಗಳನ್ನು ಬಿಡುಗಡೆ ಮಾಡಿದ್ದಾರೆ. ಅಕ್ರಮಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಸಿಂಧೂರಿ, ಲಿಂಗಾಂಬುದಿ ಪಾಳ್ಯದಲ್ಲಿ ರೆಸಾರ್ಟ್ ನಿರ್ಮಿಸಲು ಉದ್ದೇಶಿಸಿದ್ದ ಯೋಜನೆಗೆ ಬ್ರೇಕ್ ಹಾಕಿದ್ದಾರೆ.
ಲಿಂಗಾಂಬುದಿ ಕೆರೆ ಬಫರ್ ಝೋನ್ನಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಮಾಡಿದ್ದ ಭೂ ಪರಿವರ್ತನೆ ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ. ಎರಡು ಎಕರೆ ಜಾಗದಲ್ಲಿ ರೆಸಾರ್ಟ್ ನಿರ್ಮಿಸಲು ಉದ್ದೇಶಿಸಲಾಗಿತ್ತು. ಭೂ ಅಕ್ರಮದಲ್ಲಿ ಭಾಗಿಯಾಗಿ ತಪ್ಪು ಮಾಹಿತಿ ನೀಡಿದ ಮೂಡಾ ಅಧಿಕಾರಿ ವಿರುದ್ದ ಕ್ರಮಕ್ಕೂ ಆದೇಶಿಸಿದ್ದಾರೆ.
ಕೇರ್ಗಳ್ಳಿ ಸರ್ವೆ ನಂ 115 ರಲ್ಲಿ ಆರ್ಟಿಸಿಯಲ್ಲಿ ಹೆಚ್ಚುವರಿಯಾಗಿ ದಾಖಲಾಗಿದ್ದ ಖಾತೆ ರದ್ದತಿಗೂ ಆದೇಶಿಸಿದ್ದಾರೆ. 115ನೇ ಸರ್ವೆ ನಂ. ನಲ್ಲಿ 61 ಎಕರೆ ಜಮೀನಿಗೆ ಆರ್ಟಿಸಿಯಲ್ಲಿ ಖಾತೆ ಮಾಡಲಾಗಿತ್ತು. ಭೂಮಿಯೇ ಇಲ್ಲದವರು ಆರ್ಟಿಸಿಯಲ್ಲಿ ಹೆಸರು ಸೇರಿಸಿ ಮೂಡಾದಿಂದ ಕೋಟ್ಯಾಂತರ ರೂ. ಪರಿಹಾರ ಪಡೆದಿದ್ದರು. ಹೀಗಾಗಿ ಖಾತೆ ರದ್ದತಿಗೆ ಸಿಂಧೂರಿ ಆದೇಶಿಸಿದ್ದಾರೆ.