ಚಿಕ್ಕೋಡಿ: ಕಾಗವಾಡ ಯೂತ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಅಪರಾಜ ಮೇಲೆ ದುಷ್ಕರ್ಮಿಗಳು ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಐನಾಪುರ ಪಟ್ಟಣದಲ್ಲಿ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದು, ಬಳಿಕ ಪರಾರಿಯಾಗಿದ್ದಾರೆ.
ಪ್ರಶಾಂತ್ ಅವರು ವಾಹನದಲ್ಲಿ ಸಾಗುತ್ತಿದ್ದಾಗ ದುಷ್ಕರ್ಮಿಗಳು ಅಡ್ಡಗಟ್ಟಿ ಅವರ ಮೇಲೆ ದಾಳಿ ಮಾಡಿದ್ದಾರೆ. ತೀವ್ರ ಗಾಯಗೊಂಡಿರುವ ಪ್ರಶಾಂತ್ ಅಪರಾಜ ಅವರಿಗೆ ಕಾಗವಾಡ ಸಾರ್ವಜನಿಕ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತ್ತು. ಪ್ರಶಾಂತ್ ಅವರು ಪ್ರಾಣಹಾನಿಯಿಂದ ಪಾರಾಗಿದ್ದಾರೆ. ಆದರೆ, ದೇಹದ ಕೆಲವು ಭಾಗಗಳಿಗೆ ತೀವ್ರ ಗಾಯಗಳಾಗಿವೆ ಮೂಲಗಳಿಂದ ತಿಳಿದುಬಂದಿದೆ.
ಪಕ್ಷ ಬದಲಾಯಿಸಿದ್ದ ಪ್ರಶಾಂತ್ ಅವರು ಮೊದಲು ಕಾಗವಾಡ ಬಿಜೆಪಿ ಶಾಸಕ ಆಪ್ತನಾಗಿದ್ದರು. ಕೆಲದಿನಗಳ ಹಿಂದೆ ಕಾಂಗ್ರೆಸ್ ಸೇರಿ ಪಕ್ಷದ ಸಂಘಟನೆ ತೀವ್ರಗೊಳಿಸಿದ್ದರು. ಜೂತೆಗೆ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆಯನ್ನೂ ನೀಡಿದ್ದರು.
ಕಾಂಗ್ರೆಸ್ ಮುಖಂಡ ಪ್ರಶಾಂತ್ ಮೇಲಿನ ಹಲ್ಲೆ ಖಂಡಿಸಿ ಮಂಗಳವಾರ ಐನಾಪೂರದಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ. ಐನಾಪೂರ ಪಟ್ಟಣ ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಸ್ಥಳಕ್ಕೆ ಯಳಂದೂರು ಪಟ್ಟಣ ಪೊಲೀಸರು ಶ್ವಾನ ದಳದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.