ನೆಲಮಂಗಲ: ಬೈಕ್ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ರಸ್ತೆಯ ಪಕ್ಕ ಕಟ್ಟಿದ್ದ ಫ್ಲೆಕ್ಸ್ಗೆ ಬೈಕ್ ತಾಗಿ ರಸ್ತೆಗೆ ಬಿದ್ದು ಯುವಕನೋರ್ವ ಸಾವನ್ನಪ್ಪಿದ ಘಟನೆ ನೆಲಮಂಗಲದಲ್ಲಿ ನಡೆದಿದೆ.

ಫ್ಲೆಕ್ಸ್, ಬ್ಯಾನರಿಗೆ ಹೈಕೋರ್ಟ್ ನಿಷೇಧ ಹೇರಿದ್ದರೂ, ಕ್ಯಾರೇ ಇಲ್ಲ ಅನ್ನೋ ಪ್ರವೃತ್ತಿ ಮುಂದುವರಿದಿದ್ದು,, ನೆಲಮಂಗಲದಲ್ಲಿ ರಸ್ತೆ ಪಕ್ಕ ಅಳವಡಿಸಿದ್ದ ಫ್ಲೆಕ್ಸ್ ಅಮಾಯಕ ಯುವಕನನ್ನು ಬಲಿ ಪಡೆದುಕೊಂಡಿದೆ. ಮೃತನನ್ನು ತೇಜಸ್(27 ವ) ಎಂದು ಗುರುತಿಸಲಾಗಿದೆ.
ನೆಲಕ್ಕೆ ಬಿದ್ದ ರಭಸಕ್ಕೆ ತೇಜಸ್ ತಲೆಗೆ ಗಂಭೀರವಾಗಿ ಪೆಟ್ಟಾಗಿತ್ತು. ಬಳಿಕ ಆತನನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದ ತೇಜಸ್, ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ.
ನೆಲಮಂಗಲದ ನಿವಾಸಿಯಾಗಿದ್ದ ಮೃತ ತೇಜಸ್ ಗೌಡ, ಜರ್ಮನಿಯಲ್ಲಿ ಎಂ.ಎಸ್ ವ್ಯಾಸಂಗ ಮಾಡುತ್ತಿದ್ದರು. ಕಾಲೇಜು ರಜೆ ಇದ್ದ ಕಾರಣ ಕೆಲ ದಿನಗಳ ಹಿಂದೆ ನೆಲಮಂಗಲಕ್ಕೆ ಬಂದಿದ್ದರು. ದುರಾದೃಷ್ಟವಶಾತ್ ತೇಜಸ್ ಫ್ಲೆಕ್ಸ್ನಿಂದಾಗಿ ಕೊನೆಯುಸಿರೆಳಿದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ನೆಲಮಂಗಲ ನಗರದಲ್ಲಿ ಫ್ಲೆಕ್ಸ್ಗಳು ಹಾವಳಿ ಹೆಚ್ಚಾಗಿದ್ದು, ನಗರಸಭೆಯ ನಿರ್ಲಕ್ಷ್ಯಕ್ಕೆ ಯುವಕ ಬಲಿಯಾಗಿದ್ದಾನೆ, ರಸ್ತೆಯಲ್ಲಿ ಅಳವಡಿಸಿರುವ ಫ್ಲೆಕ್ಸ್ಗಳನ್ನ ತೆರವುಗೊಳಿಸಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.








