

ಸುಳ್ಯ: ರಾಜಕೀಯ ನಿವೃತ್ತಿ ಘೋಷಿಸಿದ ಸಚಿವ ಎಸ್.ಅಂಗಾರ ಇದೀಗ ಹೇಳಿಕೆ ಹಿಂಪಡೆದಿದ್ದು, ಪಕ್ಷದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೇನೆ ಎಂದು ಹೇಳಿದ್ದಾರೆ.
ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಹೇಳಿಕೆಯನ್ನು ನೋವಿನಿಂದ ಹೇಳಿದ್ದೇನೆ. ನಾನು ಮೊದಲಿನಂತೆ ಸಕ್ರಿಯವಾಗಿದ್ದು, ಭಾಗೀರಥಿ ಮುರುಳ್ಯ ಅವರ ಗೆಲುವೊಂದೇ ನಮ್ಮ ಮುಂದಿನ ನಡೆಯಾಗಿದೆ. ವೈಯಕ್ತಿಕವಾಗಿ ನೀಡಿದ ಆ ಹೇಳಿಕೆಯನ್ನು ಹಿಂದಕ್ಕೆ ಪಡೆಯುತ್ತಿದ್ದೇನೆ ಎಂದರು.

ಆಯ್ಕೆ ಮಾಡಿದ ಅಭ್ಯರ್ಥಿ ಬಗ್ಗೆ ಬೇಸರ ಇಲ್ಲ, ಅವರ ಪರ ಕೆಲಸ ಮಾಡೋದು ನನ್ನ ಹೊಣೆಗಾರಿಕೆಯಾಗಿದೆ. ನನ್ನ ಕಾರ್ಯಕರ್ತರು ಜೊತೆ ನಿಂತಿದ್ದಕ್ಕೆ ಧನ್ಯವಾದಗಳು. ನನಗೆ ಯಾವುದೇ ಅಸಮಾಧಾನ ಮತ್ತು ಭಿನ್ನಾಭಿಪ್ರಾಯ ಇಲ್ಲ. ಪಕ್ಷದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೇನೆ. ನಾನು ಬೇಸರದಲ್ಲಿ, ಉದ್ವೇಗದಲ್ಲಿ ಹೇಳಿದ ಮಾತನ್ನು ವಾಪಸ್ಸು ಪಡೆಯುತ್ತೇನೆ. ಮುಂದೆ ಪಕ್ಷದ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಿ ಗೆಲ್ಲಿಸುವುದು ನನ್ನ ಗುರಿಯಾಗಿದೆ ಎಂದು ಹೇಳಿದರು.