ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಭಾರೀ ಲಾಭ ಪಡೆದುಕೊಂಡು ಮೂರು ಸ್ಥಾನಗಳನ್ನು ಗೆದ್ದಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಭಾರೀ ಮುಖಭಂಗವಾಗಿದೆ.
ಬಿಜೆಪಿಯ ಅಭ್ಯರ್ಥಿ ನಿರ್ಮಲಾ ಸೀತಾರಾಮನ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜೈರಾಂ ರಮೇಶ್ ಅವರಿಗೆ ಮೊದಲ ಸುತ್ತಿನ ಪ್ರಾಶಸ್ಯ ಮತಗಳಲ್ಲಿ ಗೆಲುವು ಸಿಕ್ಕಿದೆ. ಎರಡನೇ ಪ್ರಾಶಸ್ಯ ಮತದಲ್ಲಿ ನಟ ಜಗ್ಗೇಶ್ ಅವರಿಗೆ 44 ಮತಗಳು ಸಿಕ್ಕಿದ್ದು, ಬಿಜೆಪಿಯಲ್ಲಿ ಒಂದು ಮತವನ್ನು ಕೊನೆ ಕ್ಷಣದವರೆಗೆ ಉಳಿಸಿಕೊಂಡಿತ್ತು. ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಅವರಿಗೆ ಈ ಸುತ್ತಿನಲ್ಲಿ 32 ಮತಗಳು ಲಭಿಸಿತ್ತು.
ಕಾಂಗ್ರೆಸ್ ಅಭ್ಯರ್ಥಿ ಜೈರಾಂ ರಮೇಶ್ ಅವರಿಗೆ 46 ಮೊದಲ ಪ್ರಾಶಸ್ಯ ಮತಗಳು ಸಿಕ್ಕಿದ್ದು, ಗೆಲುವು ಸಾಧಿಸಿದ್ದಾರೆ. ಆದರೆ ಕಾಂಗ್ರೆಸ್ ನ ಮನ್ಸೂರ್ ಖಾನ್ ಹಾಗೂ ಜೆಡಿಎಸ್ ನ ಕುಪೇಂದ್ರ ರೆಡ್ಡಿ ರೋಚಕ ಸೋಲು ಕಂಡಿದ್ದು, ಎರಡೂ ಪಕ್ಷಗಳಿಗೂ ತೀವ್ರ ಮುಖಭಂಗವಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಎರಡನೇ ಬಾರಿಗೆ ಕರ್ನಾಟಕದಿಂದ ರಾಜ್ಯಸಭೆಗೆ ಆರಿಸಿ ಬರುತ್ತಿದ್ದು, ಬಿಜೆಪಿ ಪಾಳಯದಲ್ಲಿ ಸಂಭ್ರಮಾಚರಣೆ ಕಂಡುಬರುತ್ತಿದೆ. ಈ ಚುನಾವಣೆಯಲ್ಲಿ ನಿರ್ಮಲಾ ಸೀತರಾಮನ್, ಜಗ್ಗೇಶ್ ಹಾಗೂ ಲೆಹರ್ ಸಿಂಗ್ ಬಿಜೆಪಿ ಪರ ವಿಜಯದ ಕಹಳೆ ಮೊಳಗಿಸಿದ್ದಾರೆ.