ನೀವು ಯಾರು? “ಮಣ್ಣಲ್ಲಿ ಹುಟ್ಟಿ ಮಣ್ಣಾದ ಅದ್ಬುತ ಸಾಧನೆಗಳು ಕಣ್ಣಲ್ಲಿ ಕಾಣದೆ ಮರೆಯಾಗಿದೆ, ನಿಮ್ಮನ್ನು ನೀವು ಕಾಣುವ ಶಿಕ್ಷಣದ ಪ್ರಯತ್ನವಿರದೆ, ಕಾಣದ ಶಿಕ್ಷಣಕ್ಕೆ ಪರೀತಪಿಸುವಿರೇಕೆ?”
ನಾನು ಯಾರೆಂದು ನನಗೇ ಅರ್ಥವಾಗದ ಹೊರತು ಅನ್ಯರ ಗುಣಗಾನ ಮಾಡುವುದರಲ್ಲಿ ಅರ್ಥವೆಲ್ಲಿದೆ? ಒಮ್ಮೊಮ್ಮೆ ನನಗೂ ಅರ್ಥವಾದದ್ದು ಇಷ್ಟೇ. ಯಾರಾದರೂ ನನ್ನಲ್ಲಿ ನೀನಾರು?ಎಂದು ಪ್ರಶ್ನಿಸಿದರೆ ಮೂಕನಾಗಿದ್ದದ್ದೇ ಹೆಚ್ಚು. ಅರ್ಥವಿರದ ಬಾಹ್ಯ ಹೆಸರು ವಿಳಾಸ ಕೊಡುವ ಮೂರ್ಖ ಉತ್ತರ ಕೊಟ್ಟಿರುವೆನಷ್ಟೇ. ಮನೆಯ ಮಕ್ಕಳು ನಾನೇನೆಂದು ಅರ್ಥವಿಸಿಕೊಂಡಿದ್ದಾರೆ. ತರಗತಿಯ ಮಕ್ಕಳು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅರ್ಥವಿಸಿಕೊಂಡಿದ್ದಾರೆ.
ಸಮಾಜ ಭಿನ್ನವಾಗಿ ನನ್ನ ವ್ಯಕ್ತಿತ್ವ ಬಿಂಬಿಸುತಿದೆ, ಅಂದರೆ ನಿಜವಾಗಲೂ ನಾನ್ಯಾರು? ನಾನು ಏನೆಂದು ಇತರರು ಅರ್ಥವಿಸುವ ನನ್ನತನ ನನಗರ್ಥವಾಗಿಲ್ಲ. ಎಷ್ಟೋ ಜನರ ಮುಗ್ದ ಭಾವಗಳಿಗೆ ತಡೆಯಾಗಿದ್ದೇನೆ, ಹಲವು ಬುದ್ದಿವಂತಿಕೆ ಹೊಂದಿದ ಮುಗ್ದ ಮನಸಿಗರನ್ನು ಸಂಕುಚಿತ ಯೋಚನೆಯತ್ತ ಕರೆದೊಯ್ದಿದ್ದೇನೆ, ನನ್ನಲ್ಲೇ ಇರುವ ಋಣಾತ್ಮಕತೆಯಿಂದ ಎಲ್ಲೋ ಹೋಗಬೇಕಾದವನು ಇನ್ನೂ ಇಲ್ಲೇ ಇದ್ದೇನೆ, ಕನಿಷ್ಠ ಮನೆ ಮಕ್ಕಳಿಗೂ ಕ್ಷಮಿಸದ ಕಠೋರಿಯಾಗಿದ್ದೇನೆ ಅನಿಸುತಿದೆ. ಅನಿಸಿದರೆ ಸಾಕಾಗಲ್ಲ ಬದಲಾಗಿದ್ದೇನೆ ಎಂದು ನೂರು ಬಾರಿ ಹೇಳಿದರೂ ಬದಲಾಗಲಾರದ ರಕ್ತಗತ ಯೋಚನೆ ರೋಮ ರೋಮಗಳಲ್ಲಿ ಹುದುಗಿ ಬಿಟ್ಟಿದೆ. ನಿಮಗೊತ್ತಿದೆಯಾ ನನ್ನನ್ನು ಬದಲಾಯಿಸಲು.
ನನಗೂ ಅನಿಸಿತ್ತು ಅದು ‘ಯೋಚನೆ’ ಮಾತ್ರ ಸುಲಭವಾಗಿ ಸರಿ ಪಡಿಸಬಹುದು ಎಂದು ಆದರೆ ಅಷ್ಟು ಸುಲಭವಿಲ್ಲ.
ದುಃಖವೆಂದರೆ ಗುರುಗಳಾಗಿ ನಮ್ಮ ಮಕ್ಕಳಿಗೆ ಎಷ್ಟು ವಂಚನೆ ಮಾಡುತಿದ್ದೇವೆ ನಾವು. ಕಲಿಯಲು ಕಲಿಸುತ್ತಿಲ್ಲ ನಾವು, ಕಲಿಸುವುದನ್ನು ಕಲಿಸುತಿದ್ದೇವೆ. ಹಿಂದೊಂದು ಕಾಲದಲ್ಲಿ ಆಶ್ರಮದಲ್ಲಿ ಶಿಕ್ಷಣ ಕ್ರಮವಿತ್ತು ಎಂದು ಪುರಾಣದಲ್ಲಿ ಓದಿದ್ದೇವೆ. ಇಂದು ನಿನ್ನ ಸಾಧನೆ ಮುಗಿದೆದೆ ಎಂದ ಗುರುವಿನಲ್ಲಿ ಗುರುತ್ವ ಇತ್ತು ಎಂದನಿಸುತಿದೆ. ಅವರು ಸಾಧಕರು. ನಿಮ್ಮ ಮಕ್ಕಳು ಸಾಧನೆ ಮಾಡಬೇಕೆಂದಾದರೆ ಸಾಧಕರ ಜೊತೆ ಬಿಡಬೇಕೆ ಹೊರತು ಬಾಧಕರ ಜೊತೆಗಲ್ಲ. ಈಗಿನ ಅಂಕ ಶೇಖರಣೆಯ ತೊಟ್ಟಿಲಲ್ಲಿ ಮಕ್ಕಳು, ಶಿಕ್ಷಕರು ಜೊತೆಯಾಗಿ ಅಂಕ ಶೇಖರಣೆಯ ಸಾಧನೆ ಮಾಡುತಿದ್ದೇವೆ ಹೊರತು ನಿಸರ್ಗದತ್ತವಾಗಿ ಮೆದುಳಿನಲ್ಲಿಯ ಶಕ್ತಿಯ ಪೂರ್ಣ ಉಪಯೋಗ ಯಾವ ಮಗುವಿನಲ್ಲಿಯೂ ಆಗುತ್ತಿಲ್ಲ ಎಂಬುದೇ ಖೇಧಕರ.
ಪ್ರಮಾಣ ಪತ್ರ ಕೈ ಸೇರಿದ ಮೇಲೆ ಗುರುಗಳಾರೋ? ಶಿಷ್ಯರಾರೋ? ಪ್ರಾಣಿಗಳ ಸಂಸಾರಿಕ ಜೀವನದಂತೆ. ಆದ್ದರಿಂದ ನನ್ನದೊಂದೇ ಆಸೆ ತಪ್ಪುಗಳ ತಪ್ಪಾಗಿಸದೆ, ‘ಪರವಾಗಿಲ್ಲ’ ಎಂಬುದರಲ್ಲೇ ಶಕ್ತಿ ಕೊಟ್ಟು ಇನ್ನೂ ನಷ್ಟವಾಗಿ ಹೋಗುವ ಎಲ್ಲರ ಸಾಧನೆಯ ಶಕ್ತಿಗೆ ದಾರಿ ಕೊಡೋಣವೇ ಒಮ್ಮೆ ಯೋಚಿಸಿ ನೋಡಿ.