ಕೇರಳ: ಏಲತ್ತೂರಿನಲ್ಲಿ ಸಂಚರಿಸುತ್ತಿದ್ದ ರೈಲಿನೊಳಗೆ ಬೆಂಕಿಯಿಟ್ಟ ಪ್ರಕರಣದಲ್ಲಿ ಎನ್ಐಎಯ ಕೊಚ್ಚಿ ಹಾಗೂ ದೆಹಲಿ ಘಟಕಗಳು ಸಂಯುಕ್ತವಾಗಿ ತನಿಖೆ ನಡೆಸಲಿವೆ. ಇದೊಂದು ಭಯೋತ್ಪಾದನಾ ಕೃತ್ಯವಾಗಿದೆಯೆಂದು ಖಚಿತಪಡಿಸಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್ಐಎ) ತನಿಖೆಯನ್ನು ಕೈಗೆತ್ತಿಕೊಂಡಿದೆ. ಆರೋಪಿ ನೋಯ್ಡಾ ನಿವಾಸಿ ಶಾರೂಕ್ ಸೈಫಿ ವಿರುದ್ಧ ಯು.ಎ.ಪಿ.ಎ ಹೇರಿ ಕೊಚ್ಚಿಯ ಎನ್ಐಎ ನ್ಯಾಯಾಲಯದಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಮಂಗಳೂರು ಕೊಯಂಬತ್ತೂರು ಸ್ಫೋಟಗಳು, ಭೋಪಾಲ್ ಉಜೈನ್ ರೈಲು ಸ್ಫೋಟಕ್ಕೆ ಸಂಬಂಧಿಸಿ ಆರೋಪಿ ಶಾರೂಕ್ ಸೈಫಿಗೆ ನಂಟಿದೆಯೇ ಎಂದು ತನಿಖೆ ನಡೆಸಲಾಗುವುದು. ಶಾರೂಕ್ ಸೈಫಿಯೊಂದಿಗೆ ಕೇರಳದಲ್ಲಿ ನಂಟು ಹೊಂದಿದವರು ಹಾಗೂ ಬೆಂಕಿ ಇಟ್ಟ ಬಳಿಕ ಪರಾರಿಯಾಗಲು ಆತನಿಗೆ ಸಹಾಯವೊದಗಿಸಿದವರು ಯಾರೆಂದು ಪತ್ತೆಹಚ್ಚಲಾಗುವುದು. ಆರೋಪಿ ದೆಹಲಿಯಿ೦ದ ಯಾವಾಗ ಕೇರಳಕ್ಕೆ ತಲುಪಿದ್ದಾನೆ. ಎಲ್ಲೆಲ್ಲಿ ತಂಗಿದ್ದಾನೆ, ಯಾರನ್ನು ಭೇಟಿಯಾಗಿದ್ದಾನೆ, ಕೃತ್ಯಕ್ಕೆ ಯಾರಾದರೂ ಸಹಾಯವೊದಗಿಸಿದ್ದಾರೆಯೇ ಮುಂತಾದ ವಿಷಯಗಳಲ್ಲಿ ಎನ್.ಐ.ಎ ತನಿಖೆ ನಡೆಸಲಿದೆ. ಎಪ್ರಿಲ್ 2ರಂದು ರಾತ್ರಿ 9 ಗಂಟೆ ವೇಳೆ ಆಲಪ್ಪುಳ ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ಆರೋಪಿ ಶಾರೂಕ್ ಸೈಫಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಇದರಿಂದ ಒಂಭತ್ತು ಮಂದಿ ಸುಟ್ಟು ಗಾಯಗೊಂಡಿದ್ದರು. ಇದೇ ವೇಳೆ ಮೂವರು ಪ್ರಯಾಣಿಕರು ರೈಲಿನಿಂದ ಬಿದ್ದು ಮೃತಪಟ್ಟಿದ್ದರು. ಎರಡು ವಾರ ಕಾಲ ಈ ಪ್ರಕರಣದ ಕುರಿತು ಕೇರಳ ಪೊಲೀಸ್ನ ಪ್ರತ್ಯೇಕ ತಂಡ ತನಿಖೆ ನಡೆಸಿತ್ತು.
ಆದರೆ ಈ ಕೃತ್ಯದ ಗಂಭೀರತೆಯನ್ನು ತಿಳಿದು ತನಿಖೆಯನ್ನು ಎನ್ಐಎಗೆ ಹಸ್ತಾಂತರಿಸಲಾಗಿದೆ. ಇದೇ ವೇಳೆ ಹನ್ನೊಂದು ದಿನಗಳ ಕಸ್ಟಡಿ ಕಾಲಾವಧಿ ಮುಗಿದ ಹಿನ್ನೆಲೆಯಲ್ಲಿ ಆರೋಪಿ ಶಾರೂಕ್ ಸೈಫಿಯನ್ನು ಪೊಲೀಸರು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ.